ನವದೆಹಲಿ: ಇತ್ತೀಚೆಗೆ ಜಾರ್ಖಂಡ್ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆಯಲ್ಲಿ ದಾಖಲೆ ಮುರಿದ ಕ್ರೀಡಾಪಟುಗಳಾದ ಗುರಿಂದರ್ವೀರ್ ಸಿಂಗ್, ವಿಶಾಲ್ ಟಿಕೆ, ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ ಅವರ ಪ್ರದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದರು.
ನಿನ್ನೆ ನಡೆಸಿದ 134ನೇ ಆವೃತ್ತಿಯ ಮನ್ ಕೀ ಬಾತ್ನಲ್ಲಿ ಅವರು ಮಾತನಾಡಿದರು.
ಗುರಿಂದರ್ವೀರ್ ಸಿಂಗ್ ಫೈನಲ್ನಲ್ಲಿ 10.09 ಸೆಕೆಂಡುಗಳಲ್ಲಿ ಓಡಿ 10.10 ಸೆಕೆಂಡುಗಳೊಳಗೆ ಓಡಿದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದರು. ಈ ಮೂಲಕ ಅವರು, ಸೆಮಿಫೈನಲ್ನಲ್ಲಿ ಗುರಿಂದರ್ವೀರ್ ಅವರಿಂದ ದಾಖಲೆ ಕಸಿದುಕೊಂಡಿದ್ದ ಅನಿಮೇಶ್ ಕುಜೂರ್ ಅವರ ದಾಖಲೆಯನ್ನು ಮುರಿದರು. ಇನ್ನೊಂದೆಡೆ, ವಿಶಾಲ್ ಟಿಕೆ 400 ಮೀಟರ್ ಓಟವನ್ನು 44.98 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ 45 ಸೆಕೆಂಡುಗಳೊಳಗೆ ಓಡಿದ ಮೊದಲ ಭಾರತೀಯರಾದರು. ಇದು ಈ ಸೀಸನ್ನಲ್ಲಿ ಇದುವರೆಗೆ ಏಷ್ಯಾದಲ್ಲೇ ಅತ್ಯುತ್ತಮ ದಾಖಲೆಯಾಗಿದೆ.
ಭಾರತೀಯ ಅಥ್ಲೆಟಿಕ್ಸ್ಗೆ ಮತ್ತೊಂದು ಮಹತ್ವದ ಸಾಧನೆಯಾಗಿ, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ತೇಜಸ್ವಿನ್ ಶಂಕರ್ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಡೆಕಾಥ್ಲಾನ್ ಸ್ಪರ್ಧೆಯಲ್ಲಿ 8,000 ಅಂಕಗಳ ಗಡಿಯನ್ನು ದಾಟಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರೀಡಾಪಟುಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮೋದಿ, ಅವರ ಇತ್ತೀಚಿನ ಪ್ರದರ್ಶನಕ್ಕಾಗಿ ಅಭಿನಂದಿಸಿದರು.
ಕೆಲವು ದಿನಗಳ ಹಿಂದೆ, ಜಾರ್ಖಂಡ್ನ ರಾಂಚಿಯಲ್ಲಿ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ, 4 ವಿಭಿನ್ನ ಸ್ಪರ್ಧೆಗಳಲ್ಲಿ 4 ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಯಿತು. ಗುರಿಂದರ್ವೀರ್ ಸಿಂಗ್, ವಿಶಾಲ್ ಟಿಕೆ, ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ ವಿವಿಧ ವಿಭಾಗಗಳಲ್ಲಿ ಹೊಸ ದಾಖಲೆ ನಿರ್ಮಿಸಿದರು. ʼʼನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆʼʼ ಎಂದು ಮೋದಿ ಹೇಳಿದರು.
ಹೊಸ ದಾಖಲೆ
ಫೆಡರೇಶನ್ ಸ್ಪರ್ಧೆಯಲ್ಲಿ ಭಾರತದ 100 ಮೀಟರ್ ಓಟದ ರಾಷ್ಟ್ರೀಯ ದಾಖಲೆಯು ಮೂರು ಬಾರಿ ಮುರಿಯಲ್ಪಟ್ಟಿತು. ಮೊದಲು, ಸೆಮಿಫೈನಲ್-1ರಲ್ಲಿ ಗುರಿಂದರ್ವೀರ್ ಸಿಂಗ್ 10.17 ಸೆಕೆಂಡುಗಳಲ್ಲಿ ಓಡಿ, ಹಿಂದಿನ 10.18 ಸೆಕೆಂಡುಗಳ ದಾಖಲೆಯನ್ನು ಮುರಿದು ಅನಿಮೇಶ್ ಕುಜೂರ್ ಅವರ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಆದರೆ, ಸೆಮಿಫೈನಲ್-2ರಲ್ಲಿ ಅನಿಮೇಶ್ ಕುಜೂರ್ 10.15 ಸೆಕೆಂಡುಗಳಲ್ಲಿ ಓಡುವ ಮೂಲಕ ದಾಖಲೆಯನ್ನು ಮತ್ತೆ ತಮ್ಮ ಹೆಸರಿಗೆ ಮಾಡಿಕೊಂಡರು. ನಂತರ ಫೈನಲ್ನಲ್ಲಿ ಗುರಿಂದರ್ವೀರ್ 10.09 ಸೆಕೆಂಡುಗಳಲ್ಲಿ ಓಡಿ ಮತ್ತೊಮ್ಮೆ ದಾಖಲೆ ಮುರಿದರು.
"ಕೇವಲ 2 ದಿನಗಳಲ್ಲಿ, 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮೂರು ಬಾರಿ ಮುರಿಯಲಾಯಿತು. ಗುರಿಂದರ್ವೀರ್ ಸಿಂಗ್ ಮತ್ತು ಅನಿಮೇಶ್ ಕುಜುರ್ ಎಂಬ ಇಬ್ಬರು ಕ್ರೀಡಾಪಟುಗಳು ಈ ಸಾಧನೆ ಮಾಡಿದವರು. ಈ ಬಾರಿ ಮನ್ ಕಿ ಬಾತ್ನಲ್ಲಿ, ಈ ಇಬ್ಬರು ಕ್ರೀಡಾಪಟುಗಳೊಂದಿಗೆ ಮಾತನಾಡೋಣ ಎಂದು ನಾನು ಭಾವಿಸಿದೆ" ಎಂದು ಮೋದಿ ಹೇಳಿದರು.

