ನವದೆಹಲಿ: ಜುಲೈ 20ರಿಂದ ಆಗಸ್ಟ್ 13ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
25 ದಿನಗಳ ಅಧಿವೇಶನದಲ್ಲಿ 19 ಬಾರಿ ಸದನ ಸೇರಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯ ಗೆಲುವಿನ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
ತೈಣಮೂಲ ಕಾಂಗ್ರೆಸ್ ಮತ್ತು ಶಿವಸೇನಾ(ಯುಬಿಟಿ) ಬಣದ ಬಂಡಾಯ ಸಂಸದರು ಅಧಿವೇಶನದಲ್ಲಿ ಮಹತ್ವದ ಪಾತ್ರ ನಿರ್ವಹಿಸಬಹುದು ಎಂದು ವರದಿ ತಿಳಿಸಿದೆ.
ತಮ್ಮನ್ನು ಪ್ರತ್ಯೇಕ ಬಣವೆಂದು ಪರಿಗಣಿಸುವಂತೆ ಟಿಎಂಸಿಯ 20 ಮತ್ತು ಶಿವಸೇನಾದ(ಯುಬಿಟಿ) 6 ಸಂಸದರು ಸಲ್ಲಿಸಿರುವ ಮನವಿ ಕುರಿತಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರ ಇನ್ನಷ್ಟೇ ಪ್ರಕಟವಾಗಬೇಕಿದೆ.
ರಾಜ್ಯಸಭಾ ಚುನಾವಣೆ ಬಳಿಕ ಹೊಸ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದು, ಮೇಲ್ಮನೆಯಲ್ಲಿ ಎನ್ಡಿಎ ಸಂಖ್ಯೆಯು ಹೆಚ್ಚಾಗಿದೆ. ಟಿಎಂಸಿಯ ಮೂವರು ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಿದ್ದು, ಉಪಚುನಾವಣೆಯಲ್ಲಿ ಎನ್ಡಿಎಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
2029ರಲ್ಲಿ ದೇಶದ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರುವ ಮತ್ತು ಲೋಕಸಭೆ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂವಿಧಾನ ತಿದ್ದುಪಡಿ ಮಸೂದೆಯು ಕೆಳಮನೆಯಲ್ಲಿ ಸೋತಿದ್ದರಿಂದ ಕಳೆದ ಅಧಿವೇಶನವು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ನಿರಾಶೆಯೊಂದಿಗೆ ಕೊನೆಗೊಂಡಿತ್ತು.
ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ 50ರಷ್ಟು ಹೆಚ್ಚಿಸಲು ಸರ್ಕಾರ ಈಗ ಮಸೂದೆಯನ್ನು ಪುನರ್ ರಚಿಸುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಸ್ಥಾನಗಳ ಹೆಚ್ಚಳವು ದಕ್ಷಿಣ ಭಾರತದ ಪಕ್ಷಗಳಿಗೆ ಪ್ರಮುಖ ಕಳವಳವಾಗಿತ್ತು.

