ನವದೆಹಲಿ: ನೀಟ್ ಸೇರಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಯಶಸ್ವಿ ಪ್ರತಿಭಟನೆಯಿಂದ ಪ್ರೇರಿತರಾಗಿ ಈಗ 'ಇ20 ಜನತಾ ಪಾರ್ಟಿ' ಎಂಬ ಹೊಸ ಡಿಜಿಟಲ್ ಅಭಿಯಾನ ಹುಟ್ಟಿಕೊಂಡಿದೆ.
ಎಥೆನಾಲ್ ಮಿಶ್ರಿತ ಇಂಧನದ ಬದಲಾಗಿ ಗ್ರಾಹಕರಿಗೆ ಶೇ 100ರಷ್ಟು ಪೆಟ್ರೋಲ್ ಒದಗಿಸಬೇಕು. ಅಲ್ಲದೆ ಈ ನೀತಿಯ ಹೊಣೆ ಹೊತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜೀನಾಮೆ ನೀಡಬೇಕು ಎಂದು ಇ20 ಜನತಾ ಪಾರ್ಟಿ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ಭಾರಿ ಸದ್ದು ಮಾಡುತ್ತಿದ್ದು, 'ಎಕ್ಸ್' (ಟ್ವಿಟರ್) ಖಾತೆ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಬೆಂಬಲಿಗರನ್ನು ಪಡೆದುಕೊಂಡಿದೆ. ಹಾಗೆಯೇ ಇನ್ಸ್ಟಾಗ್ರಾಮ್ನಲ್ಲಿ 2.7 ಲಕ್ಷ ಅನುಯಾಯಿಗಳನ್ನು ಹೊಂದಿದೆ.
'ನಾವು ಎಥೆನಾಲ್ ಸಬ್ಸಿಡಿ ಅಥವಾ ಉಚಿತ ಇಂಧನ ಕೇಳುತ್ತಿಲ್ಲ. ಎಥೆನಾಲ್ ಯೋಜನೆಯನ್ನು ರದ್ದುಗೊಳಿಸಿ ಎಂದೂ ಹೇಳುತ್ತಿಲ್ಲ. ಪ್ರತಿಯೊಬ್ಬ ಗ್ರಾಹಕನಿಗೆ ತನಗೆ ಬೇಕಾದ ಇಂಧನ ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕಿರಬೇಕು ಎಂಬುದಷ್ಟೇ ನಮ್ಮ ಬೇಡಿಕೆ' ಎಂದು ಇ20 ಜನತಾ ಪಾರ್ಟಿ ಸ್ಪಷ್ಟಪಡಿಸಿದೆ.
ಈ ಅಭಿಯಾನಕ್ಕೆ ವಾಹನ ಸಾರಿಗೆ ಒಕ್ಕೂಟಗಳಿಂದಲೂ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ದೆಹಲಿ ಟ್ಯಾಕ್ಸಿ ಮತ್ತು ಪ್ರವಾಸಿ ವಾಹನ ಮಾಲೀಕರ ಸಂಘವು ಇ20 ಪೆಟ್ರೋಲ್ ಬಳಕೆಯಿಂದ ಹಳೆಯ ವಾಹನಗಳ ಇಂಜಿನ್ ಹಾನಿಗೊಳಗಾಗುತ್ತಿದೆ ಮತ್ತು ಮೈಲೇಜ್ ಕನಿಷ್ಠ ಶೇ 8ರಿಂದ 15ರಷ್ಟು ಕಡಿಮೆಯಾಗುತ್ತಿದೆ ಎಂದು ಆರೋಪಿಸಿ ಆಗಸ್ಟ್ 4ರಂದು ಸಂಸತ್ ಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ.

