ಕೋಝಿಕ್ಕೋಡ್: :ತಿರುವಂಬಾಡಿ ಬಳಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ವೊಂದರ ಟಿಕೆಟ್ ಶುಲ್ಕ ಸಂಗ್ರಹಣೆಯನ್ನು ಗನ್ ತೋರಿಸಿ ದರೋಡೆ ಮಾಡಿದ್ದ ಆರೋಪದಲ್ಲಿ 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ 71 ವರ್ಷದ ವ್ಯಕ್ತಿಯೊಬ್ಬನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ ರವಿವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಮಲಪ್ಪುರಂ ಜಿಲ್ಲೆಯ ಅರಿಕೋಡ್ ಗ್ರಾಮದ ನಿವಾಸಿ ಕೆ.ವಿ.ಜೋಸ್ ಎಂದು ಗುರುತಿಸಲಾಗಿದ್ದು, ಆತ ಸದ್ಯ ಮೈಸೂರಿನ ನರಸಿಂಹರಾಜದಲ್ಲಿ ಶಿವಕುಮಾರ್ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ ಎಂದು ಹೇಳಲಾಗಿದೆ.
1990ರಲ್ಲಿ ತಿರುವಂಬಾಡಿ ಮತ್ತು ಕೂಂಬರದ ನಡುವೆ ಸಂಚರಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನ ನಿರ್ವಾಹಕರೊಬ್ಬರಿಗೆ ಗನ್ ತೋರಿಸಿ, ಜೋಸ್ ಟಿಕೆಟ್ ಶುಲ್ಕ ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ತಿರುವಂಬಾಡಿ ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡರೂ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದರು. ಹೀಗಾಗಿ, ನ್ಯಾಯಾಲಯ ಆರೋಪಿಯ ಬಂಧನಕ್ಕೆ ವಾರಂಟ್ ಜಾರಿಗೊಳಿಸಿತ್ತು.
ಘಟನೆ ಬಳಿಕ ಮೈಸೂರಿಗೆ ಪರಾರಿಯಾಗಿದ್ದ ಜೋಸ್, ಹೊಸ ಹೆಸರಿನಲ್ಲಿ ಮದುವೆಯಾಗಿ, ಅಲ್ಲಿಯೇ ಕುಟುಂಬದೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 8ರಂದು ಜೋಸ್ ಹಾಗೂ ಆತನ ಪತ್ನಿ ನಡುವೆ ನಡೆದ ಕೌಟುಂಬಿಕ ವ್ಯಾಜ್ಯವೊಂದರ ಸಂಬಂಧ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಮನೆಯ ಶೋಧ ಕಾರ್ಯಾಚರಣೆಯ ವೇಳೆ, ಆತನ ಹಾಸಿಗೆಯ ಕೆಳಗೆ ಒಂದು ಗನ್ ಹಾಗೂ ಕೆಲವು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಗನ್ ಮತ್ತು ದಾಖಲೆಗಳ ಕುರಿತು ಜೋಸ್ ನನ್ನು ಪ್ರಶ್ನೆೆಗೊಳಪಡಿಸಿದಾಗ, ಆತ ಸಮಾಧಾನಕರ ವಿವರಣೆ ನೀಡುವಲ್ಲಿ ವಿಫಲನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ, ಮೈಸೂರು ಪೊಲೀಸರು ಈ ವಿವರಗಳನ್ನು ಕೇರಳ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಆತನ ವಿವರಗಳನ್ನು ಪರಿಶೀಲಿಸಿದ ಕೇರಳ ಪೊಲೀಸರು, ಆತನಿಗೆ ಅಪರಾಧದ ಹಿನ್ನೆಲೆ ಇದೆ ಹಾಗೂ 1990ರಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದಾನೆ ಎಂದು ದೃಢಪಡಿಸಿದ್ದಾರೆ.
ಇದರ ಬೆನ್ನಿಗೇ, ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಗೆ ತಲುಪಿದ ತಿರುವಂಬಾಡಿ ಪೊಲೀಸರು, ಜೋಸ್ ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ, ಆತನನ್ನು ತಿರುವಂಬಾಡಿಗೆ ಕರೆತರಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

