ಈ ಘಟನೆ ಶುಕ್ರವಾರ ನಸುಕಿನಲ್ಲಿ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ಕೆಲವು ವ್ಯಕ್ತಿಗಳು ಕೋಟೆಯ ಹಿಂಬದಿಗೆ ವಾಹನವೊಂದರಲ್ಲಿ ತಲುಪಿದ್ದು, ಅಲ್ಲಿ ಇಡಲಾಗಿದ್ದ ಫಿರಂಗಿಯ ತುಣುಕೊಂದನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಸ್ಥಳದ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಕರೇರಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಶಾಂತ್ ಶರ್ಮ ತಿಳಿಸಿದ್ದಾರೆ.
ಘಟನೆಯಲ್ಲಿ ಅಂತಾರಾಜ್ಯ ಅಥವಾ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲ ಭಾಗಿಯಾಗಿರುವ ಸಾಧ್ಯತೆ ಸೇರಿದಂತೆ ಎಲ್ಲ ಆಯಾಮಗಳಲ್ಲೂ ಈ ಕಳವು ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೀಗ ಕಳವಾಗಿರುವ ಫಿರಂಗಿಯು ಕೆಲವು ದಿನಗಳ ಹಿಂದೆ ಅದನ್ನು ಅಳವಡಿಸಲಾಗಿದ್ದ ಸ್ಥಳದಿಂದ ಕೆಳಗೆ ಬಿದ್ದಿತ್ತು. ಆದರೆ, ಅದನ್ನು ಸುರಕ್ಷಿತ ಸ್ಥಳಕ್ಕೆ ಮತ್ತೆ ಸ್ಥಳಾಂತರಿಸಿರಲಿಲ್ಲ. ಇದೀಗ ಅದೇ ಫಿರಂಗಿ ಕಳವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ತರುಣ್ ಕುಮಾರ್ ಶ್ರೀ ವಾಸ್ತವ, "ಇದು ಗಂಭೀರ ಸಂಗತಿ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. "ಐತಿಹಾಸಿಕ ನರ್ವರ್ ಕೋಟೆಯಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ನಾನು ಅಲ್ಲಿಗೆ ಭೇಟಿ ನೀಡಲಿದ್ದೇನೆ" ಎಂದೂ ಅವರು ತಿಳಿಸಿದ್ದಾರೆ.
10ನೇ ಶತಮಾನದಲ್ಲಿ ಕಛ್ವಾಹ ರಜಪೂತರಿಂದ ಮರುನಿರ್ಮಾಣಗೊಂಡಿದ್ದ ಈ ಕೋಟೆಯಲ್ಲಿ ಮೂಲತಃ 14 ಐತಿಹಾಸಿಕ ಫಿರಂಗಿಗಳಿದ್ದವು. ಆದರೆ, ಈ ಇದೀಗ ಕೇವಲ 13 ಫಿರಂಗಿಗಳು ಉಳಿದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳು, ಸಂಭನೀಯ ಮಾರ್ಗಗಳು ಹಾಗೂ ಇನ್ನಿತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

