ಮೃತಪಟ್ಟ ಅಥವಾ ಜೀವಿಸಿಯೇ ಇಲ್ಲದ ಹಸುಗಳಿಗಾಗಿ ಗೋಶಾಲೆಯಲ್ಲಿ ಸರಕಾರಿ ಅನುದಾನವನ್ನು ಪಡೆಯಲಾಗಿದೆ ಎಂಬುದು ಆಡಿಟ್ನಲ್ಲಿ ಬಹಿರಂಗಗೊಂಡಿದೆ.
ರಾಜಸ್ಥಾನದಾದ್ಯಂತ 38 ಗೋಶಾಲೆಗಳು ತಮ್ಮ ಅರ್ಜಿಗಳಲ್ಲಿ ಅವುಗಳ ನಿಜವಾದ ಸಂಖ್ಯೆಗಿಂತ ಸುಮಾರು 1.31 ಲಕ್ಷ ಜಾನುವಾರುಗಳನ್ನು ಹೆಚ್ಚು ತೋರಿಸಿವೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ತಿಳಿಸಿದೆ. ಇದರ ಪ್ರಕಾರ 57.36 ಕೋಟಿ ರೂ. ಮೌಲ್ಯದ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದೆ ಎಂದು ವರದಿಯು ತಿಳಿಸಿದೆ.
ಗೋಶಾಲೆಗಳು ನಿರ್ವಹಿಸುವ ದೈನಂದಿನ ಜಾನುವಾರು ದಾಖಲೆಗಳು ಮತ್ತು ಭಾರತ್ ಪಶುಧನ್ ಅಪ್ಲಿಕೇಶನ್ನಲ್ಲಿ ಲಭ್ಯವಿರುವ ಡೇಟಾದ ನಡುವಿನ ವ್ಯತ್ಯಾಸಗಳು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿವೆ. ಸಾಕಷ್ಟು ಪರಿಶೀಲನೆಯಿಲ್ಲದೆ ಅನುದಾನಗಳನ್ನು ಮಂಜೂರು ಮಾಡಲಾಗಿದೆ ಎಂಬುದು ಬಹಿರಂಗಗೊಂಡಿದೆ.
ಆಡಿಟ್ ವರದಿಯ ಪ್ರಕಾರ, ಅಮಾನ್ಯ, ನಿಷ್ಕ್ರಿಯ ಅಥವಾ ನೋಂದಾಯಿತ ಗುರುತು ಟ್ಯಾಗ್ಗಳಿಲ್ಲದ ಜಾನುವಾರುಗಳ ಹೆಸರಿನಲ್ಲೂ ಅನುದಾನ ಪಡೆಯಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಯೋಜನೆಯಡಿ, ವಯಸ್ಕ ಜಾನುವಾರುಗಳಿಗೆ ದಿನಕ್ಕೆ 40 ಹಾಗೂ ಕರುಗಳಿಗೆ ದಿನಕ್ಕೆ 20ರೂ. ಅನುದಾನ ನೀಡಲಾಗುತ್ತದೆ. ಆದರೆ ವರದಿಯ ಪ್ರಕಾರ, ಮೃತಪಟ್ಟಿರುವ ಜಾನುವಾರುಗಳ ಹೆಸರಿನಲ್ಲಿ ಅನುದಾನ ಪಡೆಯಲಾಗಿದೆ .
ಸಿಎಜಿ ವರದಿಯಲ್ಲಿ ಜೈಪುರ ಸೇರಿದಂತೆ ಹಲವು ಪ್ರಮುಖ ಗೋಶಾಲೆಗಳ ಹೆಸರು ಉಲ್ಲೇಖಗೊಂಡಿವೆ. ವರದಿ ಪ್ರಕಾರ, ಜೈಪುರದ ಪಿಂಜರಾಪೋಲ್ ಗೋಶಾಲೆಗೆ ಸುಮಾರು 1.81 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ. ಹಿಂಗೋನಿಯಾ ಗೋಶಾಲೆಗೆ ಸುಮಾರು 1.41 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.
ಅತ್ಯಂತ ದೊಡ್ಡ ಅಕ್ರಮವು ದೀಗ್ ಜಿಲ್ಲೆಯ ಶ್ರೀ ಬ್ರಜ್ ಕಾಮದ್ ಸುರಭಿ ವನ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೋಶಾಲೆಯಲ್ಲಿ ಪತ್ತೆಯಾಗಿದ್ದು, ಈ ಗೋಶಾಲೆಗೆ ಸುಮಾರು 16.36 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅದೇ ರೀತಿ, ಜಾಲೋರ್ ಜಿಲ್ಲೆಯ ಪಥ್ಮೇಡಾದ ಶ್ರೀ ಗೋಪಾಲ್ ಗೋವರ್ಧನ್ ಗೋಶಾಲೆಗೆ ಸುಮಾರು 10.95 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ, ಭರತ್ಪುರ ಜಿಲ್ಲೆಯ ಮೂರು ಗೋಶಾಲೆಗಳು ಹಾಗೂ ಸಿಕರ್ ಜಿಲ್ಲೆಯ ಆರು ಗೋಶಾಲೆಗಳ ಹೆಸರು ಸಿಎಜಿ ವರದಿಯಲ್ಲಿ ಉಲ್ಲೇಖಗೊಂಡಿವೆ.
ಲೆಕ್ಕಪರಿಶೋಧನೆ ವೇಳೆ ಅಕ್ರಮಗಳು ಬೆಳಕಿಗೆ ಬಂದ ಬೆನ್ನಲ್ಲೆ ಗೋಪಾಲನ ಇಲಾಖೆ 38 ಗೋಶಾಲೆಗಳಿಂದ 57.36 ಕೋಟಿ ಹೆಚ್ಚುವರಿ ಅನುದಾನವನ್ನು ವಸೂಲಿ ಮಾಡಲು ಆದೇಶ ನೀಡಿದೆ.

