ಕುಂಬಳೆ: ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ 42 ಪವನ್ ಚಿನ್ನಾಭರಣ ಹಾಗೂ 25ಸಾವಿರ ರೂ. ನಗದು ದರೋಡೆಗೈದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಅಬ್ದುಲ್ ಆಸೀಸ್ ಯಾನೆ ಸಾಂಬಿಯ ಅಸೀಸ್(58) ಎಂಬಾತನನ್ನು ಗುರುವಾರ ಪುತ್ತೂರಿನಿಂದ ಪೊಲೀಸರುಬಂಧಿಸಿದ್ದಾರೆ. ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್ಪಿ ಮಧುಸೂದನ್ ನಾಯರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. 2012 ಡಿಸೆಂಬರ್ನಲ್ಲಿ ದರೋಡೆ ಪ್ರಕರಣ ನಡೆದಿದ್ದು, 14ವರ್ಷಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಟ್ರಾನ್ಸ್ಪೋರ್ಟ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕುಂಬಳೆಯ ಅನೀಲ್ ಕುಂಬಳೆ ರಸ್ತೆ ಸನಿಹದ ಕೃಷ್ಣಸುಧಾ ನಿವಾಸದ ರಾಜೇಶ್ ಶೆಣೈ ಎಂಬವರ ಮನೆಗೆ 2012 ಡಿಸೆಂಬರ್ 22ರಂದು ರಾತ್ರಿ 7.45ರ ವೇಳೆಗೆ ನುಗ್ಗಿದ ಎಂಟು ಮಂದಿಯ ತಂಡ ಕೃತ್ಯವೆಸಗಿತ್ತು. ರಾಜೇಶ್ ಅವರ ಮುಖಕ್ಕೆ ಮತ್ತು ಬರಿಸುವ ದ್ರಾವಣ ಸಿಂಪಡಿಸಿದ ನಂತರ, ಮನೆಯವರ ಕೈ-ಕಾಲು ಕಟ್ಟಿಹಾಕಿ ಬಾಯಿಗೆ ಪ್ಲಾಸ್ಟರ್ ಬಿಗಿದು, ರಾಜೇಶ್ ಶೆಣೈ ಅವರ ಪತ್ನಿ ಅನುಷಾ ಶೆಣೈ ಅವರ ಕೈಯಲ್ಲಿದ್ದ ಎರಡುಚಿನ್ನದ ಬಳೆಗಳು, ಎರಡು ಉಂಗುರ, ತಾಯಿ ರೋಹಿಣಿ ಶೆಣೈ ಅವರ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆ, ಚಿನ್ನದ ಸರ, ಚಿಕ್ಕಮ್ಮ ಸವಿತಾ ಶೆಣೈ ಅವರ ಎರಡು ಬಳೆ, ಸಹೋದರಿ ಶಾಂತಲಾ ಶೆಣೈ ಅವರ ಕತ್ತಿನಲ್ಲಿದ್ದ ಎರಡು ನೆಕ್ಲೇಸ್, ಎರಡು ಬಳೆ, ದೊಡ್ಡಮ್ಮ ರಾಧಾ ಪೈ ಅವರ ಎರಡು ಬಳೆ, ಒಂದು ಸರ ಸೇರಿದಂತೆ 42ಪವನು ಚಿನ್ನಾಭರಣ ಹಗೂ ಕಪಟಿನಲ್ಲಿದ್ದ 25ಸಾವಿರ ರೂ. ನಗದು ದೋಚಿ ಪರಾರಿಯಾಗಿತ್ತು. ರಾತ್ರಿ 9ರ ವೇಳೆಗೆ ರಾಜೇಶ್ ಅವರ ಸಂಬಂಧಿ ಡಾ. ವಾಣಿ ಅವರು ಮನೆಗೆ ಆಗಮಿಸಿದಾಗ ದರೋಡೆ ಬೆಳಕಿಗೆ ಬಂದಿತ್ತು. ಪ್ರಕರಣದ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದರೂ ಕಳ್ಳರ ಪತ್ತೆ ಸಾಧ್ಯವಾಗಿರಲಿಲ್ಲ. ಆರೋಪಿ ಪುತ್ತೂರಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ಕಾಸರಗೋಡು ಕ್ರೈಂ ಬ್ರಾಂಚ್ ಡಿವೈಎಸ್ಪಿ ಮಧುಸೂಧನನ್ ನಾಯರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಉಳಿದ ಆರೋಪಿಗಳ ಬಂಧನ ನಡೆಯಬೇಕಾಗಿದೆ.

