ನವದೆಹಲಿ: ಕೇಂದ್ರ ಸಚಿವ ಜೆ. ಪಿ. ನಡ್ಡಾ ಅವರ ಜೊತೆಗೆ ನಡೆಸಿದ ಮಾತುಕತೆ ನಿಷ್ಪ್ರಯೋಜಕವಾಗಿದ್ದು, ನಮ್ಮ 4 ಗಂಟೆಗಳ ಅಮೂಲ್ಯ ಸಮಯ ವ್ಯರ್ಥ ಮಾಡಿದ್ದೇವೆ' ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ವಕ್ತಾರ ಅಶುತೋಷ್ ರಂಕಾ ಹೇಳಿದ್ದಾರೆ.
ಹಲವು ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಜೆಪಿ ಬೆಂಬಲಿಗರು, ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ 'ಸಂಸತ್ ಚಲೊ' ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದರು.
ಈ ನಡುವೆ ತಮ್ಮನ್ನು ಭೇಟಿ ಮಾಡುವಂತೆ ಸಿಜೆಪಿ ಸದಸ್ಯರಿಗೆ ನಡ್ಡಾ ತಿಳಿಸಿದ್ದರು.
ನಡ್ಡಾ ಅವರೊಂದಿಗಿನ ಮಾತುಕತೆ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಂಕಾ, 'ನಡ್ಡಾ ಅವರೇ, ಸುಳ್ಳು ಹೇಳಬೇಡಿ. ಈ ಚಳವಳಿಯ ಶಕ್ತಿಯನ್ನು ಅರಿತ ತಕ್ಷಣ ನಿಮ್ಮ ಸರ್ಕಾರ ಹತಾಶೆಗೊಂಡಿತು. ಕೊನೆಗೆ ಈ ನಿಷ್ಟ್ರಯೋಜಕ ಸಭೆಗಾಗಿ ನಮ್ಮ ಅಮೂಲ್ಯ ಸಮಯ ಹಾಳಾಯಿತು' ಎಂದು ಹೇಳಿದ್ದಾರೆ.
'ಪ್ರತಿಭಟನೆ ಕೊನೆಗೊಳಿಸಿ, ಪರಿಸ್ಥಿತಿ ಯಥಾಸ್ಥಿತಿಗೆ ಮರಳಲು ಆಡಳಿತಕ್ಕೆ ಸಹಕರಿಸಬೇಕೆಂದು ಸಿಜೆಪಿ ಬೆಂಬಲಿಗರಲ್ಲಿ ವಿನಂತಿಸಲಾಗಿದೆ' ಎಂದು ನಡ್ಡಾ ಪೋಸ್ಟ್ನಲ್ಲಿ ತಿಳಿಸಿದ್ದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಗೆ ವ್ಯಕ್ತಪಡಿಸಿದ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ 21 ದಿನಗಳವರೆಗೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ನ್ಯಾಯಾಲದ ಆದೇಶ ಮೇರೆಗೆ ಶನಿವಾರ(ಜು.18) ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

