ಮುಂಬೈ: ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡ ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡದ ಮೇಲೆ ತ್ಯಾಜ್ಯದ ರಾಶಿ ಬಿದ್ದು, ಅವಶೇಷಗಳಡಿ ಸಿಲುಕಿರುವವರ ಶೋಧ ಮತ್ತು ರಕ್ಷಣಾ ಕಾರ್ಯ ಗುರುವಾರವೂ ಮುಂದುವರಿಯಿತು.
ಕಟ್ಟಡದ ಮೇಲೆ ಬಿದ್ದಿರುವ ತ್ಯಾಜ್ಯದ ರಾಶಿಯಡಿ ಇನ್ಣೂ 8 ಜನರು ಸಿಲುಕಿದ್ದು, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಮೃತಪಟ್ಟಿದ್ದಾರೆ. ರಕ್ಷಿಸಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿಯೇ ಅವರು ಮೃತಪಟ್ಟಿದ್ದಾರೆ.
'ಅವಶೇಷಗಳಡಿ 23 ಜನರು ಸಿಲುಕಿದ್ದರು. ಈ ಪೈಕಿ 14 ಜನರನ್ನು ರಕ್ಷಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಉಳಿದವರ ಪತ್ತೆಗಾಗಿ ಬುಧವಾರದಿಂದ ಪ್ರಯತ್ನಿಸಲಾಗುತ್ತಿದೆ' ಎಂದು ಪಾಲಿಕೆ ಆಯುಕ್ತ ವಿಜಯ್ ಸೂರ್ಯವಂಶಿ ತಿಳಿಸಿದ್ದಾರೆ.
'ಎಂಟು ಜನರ ಪೈಕಿ ಇಬ್ಬರು ಸಿಲುಕಿರುವ ಸ್ಥಳವನ್ನು ಪತ್ತೆ ಮಾಡಲಾಗಿದ್ದು, ಅವರ ರಕ್ಷಣೆಗೆ ಪ್ರಯತ್ನಗಳು ನಡೆಯುತ್ತಿವೆ. ಇತರ ಆರು ಜನರು ಎಲ್ಲಿ ಸಿಲುಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ' ಎಂದು ತಿಳಿಸಿದ್ದಾರೆ.
ಪಿಂಪ್ರಿ-ಚಿಂಚವಾಡ ನಗರದ ಮೋಶಿ ಪ್ರದೇಶದಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವಿದ್ದು, ಇಲ್ಲಿ ಬೆಟ್ಟದೆತ್ತರ ತ್ಯಾಜ್ಯ ಸುರಿಯಲಾಗಿದೆ. ಇದಕ್ಕೆ ಹೊಂದಿಕೊಂಡಂತೆ, ಆಡಳಿತ ಕಚೇರಿಯ ಮೂರು ಅಂತಸ್ತಿನ ಕಟ್ಟಡವಿದೆ.
ಬುಧವಾರ ಸುರಿದ ಭಾರಿ ಮಳೆಯಿಂದಾಗಿ ತ್ಯಾಜ್ಯವು ಈ ಕಟ್ಟಡದ ಮೇಲೆ ಬಿದ್ದು, ದುರ್ಘಟನೆ ಸಂಭವಿಸಿದೆ.
ಗಿರೀಶ್ ಮಹಾಜನ್ ರಾಜ್ಯ ವಿಪತ್ತು ನಿರ್ವಹಣಾ ಸಚಿವ ಮಹಾರಾಷ್ಟ್ರಕಟ್ಟಡದ ಅವಶೇಷಗಳಡಿ ಸಿಲುಕಿರುವ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಣೆ ಮಾಡುವುದೇ ನಮ್ಮ ಆದ್ಯತೆ. ಇದಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು ಎಸ್.ಬಿ.ಸಿಂಗ್ ಎನ್ಡಿಆರ್ಎಫ್ ಕಮಾಂಡೆಂಟ್ಕಟ್ಟಡ ಈಗಾಗಲೇ ಕುಸಿದಿದ್ದು ರಕ್ಷಣಾ ಕಾರ್ಯಕ್ಕೆ ದೊಡ್ಡ ಯಂತ್ರಗಳ ಬಳಕೆಯಿಂದ ಮತ್ತಷ್ಟು ಹಾನಿಯಾಗಲಿದೆ. ಕಾರ್ಯಾಚರಣೆಯಲ್ಲಿ ತೊಡಗಿರುವವರು ಹಾಗೂ ಅವಶೇಷಗಳಡಿ ಸಿಲುಕಿರುವವರಿಗೆ ಇದರಿಂದ ಅಪಾಯ ತಪ್ಪಿದ್ದಲ್ಲ
ಪುಣೆ ಬಳಿಯ ಪಿಂಪ್ರಿ ಚಿಂಚವಾಡ್ ಮಹಾನಗರ ಪಾಲಿಕೆಗೆ ಸೇರಿದ ಕಟ್ಟಡದ ಮೇಲೆ ತ್ಯಾಜ್ಯದ ರಾಶಿ ಕುಸಿದು ಸಂಭವಿಸಿದ ಅವಘಡದಲ್ಲಿ ನಾಪತ್ತೆಯಾಗಿರುವವರಿಗಾಗಿ ಗುರುವಾರ ಶೋಧ ನಡೆಸಲಾಯಿತು.
ಪಿಟಿಐ ಚಿತ್ರ

