ಲಖನೌ: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದ ದುರುಪಯೋಗ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳು, ಕದ್ದ ಹಣವನ್ನು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ಆರೋಪಿಗಳು ಕದ್ದ ಹಣವನ್ನು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದರು.
ಬಳಿಕ ಆ ಹಣವನ್ನು ಮರಳಿ ಪಡೆಯುತ್ತಿದ್ದರು. ಹೀಗೆ ದುರುಪಯೋಗಪಡಿಸಿಕೊಂಡ ಹಣವನ್ನು ಷೇರು ಮಾರುಕಟ್ಟೆ ಹೂಡಿಕೆಗಳಿಗೆ ಮತ್ತು ಬಡ್ಡಿ ಆಸೆಗೆ ಸಾಲ ನೀಡಲು ಬಳಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕದ್ದ ಹಣವನ್ನು ಜಮಾ ಮಾಡಲಾಗಿದೆ ಎಂದು ಶಂಕಿಸಲಾದ ಹಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದೂ ಮೂಲಗಳು ಉಲ್ಲೇಖಿಸಿವೆ.
ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ ಮತ್ತು ಕರುಣೇಶ್ ಪಾಂಡೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಹಲವು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.
ದೇಣಿಗೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ.
ಈ ಮಧ್ಯೆ, ರಾಮಮಂದಿರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಟ್ರಸ್ಟ್ನ ಮಹಂತ್ ಗೋವಿಂದ್ ದೇವ್ ಗಿರಿ ಅವರು ಬುಧವಾರ ಭೇಟಿಯಾಗಿದ್ದರು. 'ರಾಯ್ ಅವರೇನೂ ಬೇಸರಗೊಂಡಿಲ್ಲ. ಮಂದಿರದ ನಿರ್ವಹಣೆಯನ್ನು ಸುಗಮಗೊಳಿಸಲು ಸಹಕರಿಸುತ್ತಿದ್ದಾರೆ' ಎಂದಿದ್ದರು.
'ಕಣ್ಣೊರೆಸುವ ತಂತ್ರ' ಎಂದ ಅಖಿಲೇಶ್
ದೇಣಿಗೆ ಕಳವು ಪ್ರಕರಣ ಸಂಬಂಧ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದು, 'ಎಸ್ಐಟಿ ತನಿಖೆ ಕೇವಲ 'ಕಣ್ಣೊರೆಸುವ ತಂತ್ರ' ಎಂದು ಕರೆದಿದ್ದಾರೆ. ಅಲ್ಲದೆ, ಎಸ್ಐಟಿ ಸದಸ್ಯರೊಬ್ಬರು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದಾರೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಇಡೀ ರಾಮಮಂದಿರ ಟ್ರಸ್ಟ್ ಅನ್ನು ವಿಸರ್ಜಿಸಿ, ಪ್ರಾಮಾಣಿಕ ವ್ಯಕ್ತಿಗಳನ್ನು ಸೇರಿಸಿಕೊಳ್ಳುವ ಮೂಲಕ ಪುನರ್ ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

