ಚೆನ್ನೈ: ಲೋಕಭವನದ ಬಾಗಿಲುಗಳು ಸಾರ್ವಜನಿಕರ ಪಾಲಿಗೆ ಯಾವಾಗಲೂ ತೆರೆದಿರುತ್ತವೆ. ಅವರ ಸಮಸ್ಯೆಗಳನ್ನು ಮುಖ್ಯಮಂತ್ರಿ ಚಂದ್ರಶೇಖರನ್ ಜೋಸೆಫ್ ವಿಜಯ್ ಅವರಿಗೆ ಮನವರಿಕೆ ಮಾಡಿಕೊಡಲು ಸದಾ ಸಿದ್ಧ ಎಂದು ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಅರ್ಲೇಕರ್ ಈ ಹೇಳಿಕೆ ನೀಡಿದ್ದಾರೆ. ಲೋಕಭವನ ಮತ್ತು ಆಡಳಿತಾರೂಢ ಟಿವಿಕೆ ಸರ್ಕಾರದ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿರುವುದರ ನಡುವೆಯೇ ಉನ್ನತಾಧಿಕಾರಿಗಳೊಂದಿಗೆ ಮಧುರೈನಲ್ಲಿ ಇತ್ತೀಚೆಗೆ ನಡೆಸಿದ ಪರಿಶೀಲನಾ ಸಭೆ ಕುರಿತಾಗಿಯೂ ಮಾತನಾಡಿದ್ದಾರೆ.
'ಲೋಕಭವನವು ಸದಾ ಜನರೊಂದಿಗೆ ಇರುತ್ತದೆ. ಯಾರೊಬ್ಬರೂ ಹಿಂಜರಿಯದೆ ಬಂದು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಅವುಗಳ ಪರಿಹಾರಕ್ಕೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ' ಎಂದು ಭರವಸೆ ನೀಡಿದ್ದಾರೆ.
'ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವೆ' ಎಂದ ಅವರು, 'ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ಜನರ ಸಮಸ್ಯೆಗಳನ್ನು ಹಂಚಿಕೊಳ್ಳುವೆ. ಅವುಗಳ ಪರಿಹಾರಕ್ಕಾಗಿ ಕೆಲಸ ಮಾಡುವೆ' ಎಂದು ತಿಳಿಸಿದ್ದಾರೆ.
ತಮ್ಮಿಂದಾಗಲೀ, ಸರ್ಕಾರದ ಕಡೆಯಿಂದಾಗಲೀ ಆಗಬೇಕಿರುವ ಯಾವುದೇ ಕೆಲಸದ ಬಗ್ಗೆ ಜನರಲ್ಲಿ ಅಪೇಕ್ಷೆಗಳಿದ್ದರೆ ಲೋಕಭವನವನ್ನು ಸಂಪರ್ಕಿಸಿ ಎಂದು ಒತ್ತಾಯಿಸಿದ ರಾಜ್ಯಪಾಲ, 'ನಾವು (ಸರ್ಕಾರ ಮತ್ತು ಲೋಕಭವನ) ಒಟ್ಟಾಗಿ ಕೆಲಸ ಮಾಡಲಿದ್ದೇವೆ' ಎಂದಿದ್ದಾರೆ.
ಅರ್ಲೇಕರ್ ಅವರು ಮಧುರೈನ ಸರ್ಕ್ಯೂಟ್ ಹೌಸ್ನಲ್ಲಿ ರಾಜ್ಯದ ಉನ್ನತಾಧಿಕಾರಿಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದರು. ಅದು ವಿವಾದ ಸೃಷ್ಟಿಸಿತ್ತು.
ಅರ್ಲೇಕರ್ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದ ಸಚಿವ ಸಿಟಿಆರ್ ನಿರ್ಮಲ್ ಕುಮಾರ್, 'ಸರ್ಕಾರದ ಕ್ರಮವನ್ನು ಸ್ವತಂತ್ರವಾಗಿ ಪರಿಶೀಲಿಸಲು ಅಥವಾ ಪರ್ಯಾಯ ಆಡಳಿತ ನಡೆಸುವ ಸಾಂವಿಧಾನಿಕ ಅಧಿಕಾರ ರಾಜ್ಯಪಾಲರಿಗೆ ಇಲ್ಲ' ಎಂದು ಗುಡುಗಿದ್ದರು.
ರಾಜ್ಯದ ಪೂರ್ವಾನುಮತಿ ಇಲ್ಲದೆ ರಾಜ್ಯಪಾಲರು ಕರೆಯುವ ಇಂತಹ ಸಭೆಗಳಿಗೆ ಹಾಜರಾಗದಂತೆ ಟಿವಿಕೆ ಸರ್ಕಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ.

