ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ಪ್ರಾಚೀನ ಹಿಂದೂ ದೇವಾಲಯದಲ್ಲಿ ನಡೆಯುತ್ತಿದ್ದ ಶತಮಾನಗಳಷ್ಟು ಹಳೆಯ ಧಾರ್ಮಿಕ ಉತ್ಸವವನ್ನು ಭೂಗತ ಲೋಕದ ಎರಡು ಗುಂಪುಗಳ ನಡುವಿನ ಸಂಘರ್ಷದಿಂದಾಗಿ ರದ್ದುಪಡಿಸಲಾಗಿದೆ.
'ಕರಾವಳಿ ಪಟ್ಟಣ ದೇವಿನುವಾರದಲ್ಲಿರುವ ಉತ್ಪಲವನ್ನ ಶ್ರೀ ವಿಷ್ಣು ದೇವಸ್ಥಾನದಲ್ಲಿ ಜುಲೈ 23ರಿಂದ 'ದೇವಿನುವಾರ ಎಸಳ ಉತ್ಸವ' ನಡೆಯುತ್ತಿದೆ.
ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆಯಿಂದಾಗಿ ಮಂಗಳವಾರ ನಡೆಯಬೇಕಿದ್ದ ಸಾಂಪ್ರದಾಯಿಕ ಕಾವಡಿ ನೃತ್ಯವನ್ನು ರದ್ದುಪಡಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
13ನೇ ಶತಮಾನದಷ್ಟು ಹಿಂದಿನ 'ದೇವಿನುವಾರ ಎಸಳ ಉತ್ಸವ'ವು ಶ್ರೀಲಂಕಾದ ಅತ್ಯಂತ ಹಳೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ಇದನ್ನು ದ್ವೀಪದ ರಕ್ಷಕ ದೇವತೆಗಳಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟ ವಿಷ್ಣುವಿನ ಗೌರವಾರ್ಥವಾಗಿ ನಡೆಸಲಾಗುತ್ತದೆ.
'ಮಾದಕವಸ್ತು ಕಳ್ಳಸಾಗಣೆದಾರರಾದ ಶೆಹಾನ್ ಸತ್ಸಾರ ಮತ್ತು ಕಾಂಜಿಪಾನಿ ಇಮ್ರಾನ್ ವಿದೇಶಕ್ಕೆ ಪರಾರಿಯಾಗಿದ್ದಾರೆ. ಅಲ್ಲಿಂದಲೇ ಇಬ್ಬರೂ ಮಾದಕವಸ್ತು ಜಾಲವನ್ನು ನಿರ್ವಹಿಸುತ್ತಿದ್ದಾರೆ. ಈ ವರ್ಷದ ಕಾವಡಿ ಆಚರಣೆಯ ಗುತ್ತಿಗೆಯನ್ನು ಇಮ್ರಾನ್ಗೆ ಸಂಬಂಧಿಸಿದವರ ಬದಲಾಗಿ ಸತ್ಸಾರನ ಬೆಂಬಲಿಗರಿಗೆ ನೀಡಲಾಗಿದ್ದು, ಇದು ಎರಡು ಗುಂಪುಗಳ ನಡುವೆ ಕಲಹಕ್ಕೆ ಕಾರಣವಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
2025ರ ಮಾರ್ಚ್ನಲ್ಲಿ ನಡೆದಿದ್ದ ದಾಳಿಯಲ್ಲಿ ಇಮ್ರಾನ್ ಗುಂಪಿನ ಇಬ್ಬರನ್ನು ದೇವಾಲಯದ ಎದುರು ಗುಂಡಿಕ್ಕಿ ಕೊಲ್ಲಲಾಗಿತ್ತು. ಐದು ದಿನಗಳ ಹಿಂದೆ, ದೇವಾಲಯದ ಬಳಿ ಮನೆಯ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದರು.
ಧಾರ್ಮಿಕ ಉತ್ಸವವನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಅಥವಾ ಡ್ರೋನ್ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಹೀಗಾಗಿ, ಸ್ಥಳದಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

