ಕಾಸರಗೋಡು/ ಕೊಚ್ಚಿ: ರಾಜ್ಯದ ಕಾಲೇಜುಗಳಲ್ಲಿ ರ್ಯಾಗಿಂಗ್ ಅನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಕಾನೂನು ತಿದ್ದುಪಡಿ ಮಸೂದೆಯನ್ನು ಸಂಪುಟಕ್ಕೆ ಸಲ್ಲಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಸರ್ಕಾರವು ಒಂದು ವರ್ಷಕ್ಕೂ ಹೆಚ್ಚು ಕಾಲ ಕೇರಳ ರ್ಯಾಗಿಂಗ್ ನಿಷೇಧ ತಿದ್ದುಪಡಿ ಮಸೂದೆ -2025 ಅನ್ನು ವಿಳಂಬ ಮಾಡುತ್ತಿದೆ ಎಂಬ ಆರೋಪವಿದೆ.
ಮುಖ್ಯ ನ್ಯಾಯಮೂರ್ತಿ ಸೌಮನ್ ಸೇನ್ ಮತ್ತು ನ್ಯಾಯಮೂರ್ತಿ ಸಿ ಜಯಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸರ್ಕಾರದ ನಿಧಾನಗತಿಯ ವಿರುದ್ಧ ಬಲವಾದ ಟೀಕೆಗಳನ್ನು ಮಾಡಿದೆ. ಸರ್ಕಾರವು ನ್ಯಾಯಾಲಯದ ಆದೇಶಗಳನ್ನು ಬಹಳ ಹಗುರವಾಗಿ ಪರಿಗಣಿಸುತ್ತಿದೆ ಎಂದು ವಿಭಾಗೀಯ ಪೀಠವು ಗಮನಿಸಿದೆ.
ಕಾಸರಗೋಡಿನಲ್ಲಿ ವ್ಯಾಪಕವಾದ ರ್ಯಾಗಿಂಗ್:
ಹೈಕೋರ್ಟ್ನ ಟೀಕೆಯ ಬೆನ್ನಿಗೇ, ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಆರಂಭದಿಂದಲೂ ವ್ಯಾಪಕವಾದ ರ್ಯಾಗಿಂಗ್ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಪ್ಲಸ್ ಒನ್ ತರಗತಿಗಳು ಪ್ರಾರಂಭವಾಗುತ್ತಿರುವಣತೆಯೇ ರ್ಯಾಗಿಂಗ್ ಪ್ರಕರಣಗಳು ಮತ್ತೆ ತಲೆಯೆತ್ತಿಕೊಂಡಿದೆ.
ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ನಂತರ, ಎಡನೀರು ಮತ್ತು ಬೆಳ್ಳೂರಿನಲ್ಲಿ ಇದೇ ರೀತಿಯ ರ್ಯಾಗಿಂಗ್ ಪ್ರಕರಣಗಳು ವರದಿಯಾಗಿವೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಲ್ಲಿ ಕುಂಬಳೆ, ಆಡೂರು ಮತ್ತು ವಿದ್ಯಾನಗರ ಪೋಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ.
ಕಠಿಣ ಕ್ರಮಕ್ಕೆ ಪೋಷಕರ ಒತ್ತಾಯ:
ಕಳೆದ ವರ್ಷವೂ ಇದೇ ರೀತಿಯ ರ್ಯಾಗಿಂಗ್ ಪ್ರಕರಣಗಳು ವರದಿಯಾಗಿದ್ದವು. ಹೆಚ್ಚಿನ ರ್ಯಾಗಿಂಗ್ ಪ್ರಕರಣಗಳು ಚೆರ್ಕಳ, ನಾಯನ್ಮಾರ್ಮೂಲೆ, ಕುಂಬಳೆ ಮತ್ತು ಮೊಗ್ರಾಲ್ ಶಾಲೆಗಳಲ್ಲಿ ನಡೆದಿದ್ದವು. ಘರ್ಷಣೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಸ್ಥಳೀಯರು ನಿಭಾಯಿಸುವ ಹಂತಕ್ಕೆ ವಿಷಯಗಳು ತಲುಪಿದ್ದವು.
ಆದರೆ ಇಂತಹ ಘಟನೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳದಿರುವುದು ರ್ಯಾಗಿಂಗ್ ಪ್ರಕರಣಗಳು ಮರುಕಳಿಸುವುದಕ್ಕೆ ಕಾರಣವಾಗುತ್ತಿದೆ ಎಂದು ಪಿಟಿಎ, ಸ್ಥಳೀಯರು ಮತ್ತು ಪೋಷಕರು ಹೇಳುತ್ತಾರೆ. ರ್ಯಾಗಿಂಗ್ ತಡೆಗಟ್ಟುವಿಕೆಗೆ ಸಂಬಂಧಿಸಿದ ಕಾನೂನುಗಳನ್ನು ಸಾಧ್ಯವಾದಷ್ಟು ಬೇಗ ಬಲಪಡಿಸಲು ತಿದ್ದುಪಡಿ ಮಸೂದೆಯನ್ನು ಸಂಪುಟ ಪರಿಗಣಿಸಬೇಕು ಎಂಬುದು ಈಗ ಬೇಡಿಕೆ ವ್ಯಾಪಕವಾಗಿದೆ.
ಹೈಲೈಟ್ಸ್:
- ಕುಂಬಳೆ, ಎಡನೀರು, ಬೆಳ್ಳೂರಿನಲ್ಲಿ ವಿದ್ಯಾರ್ಥಿಗಳಿಂದ ಸಹಪಾಠಿಗಳ ಮೇಲೆಯೇ ಹಲ್ಲೆ
- ಕುಂಬಳೆ, ಆಡೂರು, ವಿದ್ಯಾನಗರ ಪೋಲೀಸ್ ಠಾಣೆಗಳಲ್ಲಿ ದೂರುಗಳು ದಾಖಲು
- ಕಠಿಣ ಕ್ರಮ ಕೈಗೊಳ್ಳದಿರುವುದು ರ್ಯಾಗಿಂಗ್ ಮರುಕಳಿಸುವುದಕ್ಕೆ ಕಾರಣ ಎಂದು ಪೋಷಕರು ಮತ್ತು ಪಿಟಿಎಗಳ ಅತೃಪ್ತಿ
- ಕಾನೂನು ತಿದ್ದುಪಡಿ ಮಸೂದೆಯನ್ನು ಸಾಧ್ಯವಾದಷ್ಟು ಶೀಘ್ರ ಪರಿಗಣಿಸಲು ಸಚಿವ ಸಂಪುಟಕ್ಕೆ ಪ್ರಬಲ ಬೇಡಿಕೆ



