ಲಕ್ನೊ: ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದೆಯೆನ್ನಲಾದ ದೇಣಿಗೆ ಕಳವು ಪ್ರಕರಣದಿಂದ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಬುಧವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ. ಆದರೆ, ಅಯೋಧ್ಯೆಯ ರಾಮ ಜನ್ಮಭೂಮಿ ಹೆಸರಿಗೆ ಮಸಿ ಬಳಿಯುವ ವಿರೋಧ ಪಕ್ಷಗಳ ಪ್ರಯತ್ನವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
India Today Group ಆಯೋಜಿಸಿದ್ದ 'ಪಂಚಾಯತ್ ಆಜ್ ತಕ್' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆದಿತ್ಯನಾಥ್ ಅವರು, ನಿರ್ದಿಷ್ಟವಾಗಿ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷಗಳು ಈ ವಿಷಯವನ್ನು ರಾಜಕೀಕರಣಗೊಳಿಸುತ್ತಿವೆ ಎಂದು ಅವರು ದೂರಿದರು.
"ಅಯೋಧ್ಯೆ ಘಟನೆಯಿಂದ ನಿಶ್ಚಿತವಾಗಿ ನಮ್ಮಂತಹ ರಾಮಭಕ್ತರೆಲ್ಲರ ಭಾವನೆಗಳಿಗೆ ಧಕ್ಕೆಯಾಗಿದೆ. ರಾಮಮಂದಿರ ಟ್ರಸ್ಟ್ ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಆಗುಹೋಗುಗಳಲ್ಲಿ ಮಧ್ಯಪ್ರವೇಶಿಸುವ ಯಾವ ಅಧಿಕಾರವೂ ಸರಕಾರಕ್ಕಿಲ್ಲ. ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಟ್ರಸ್ಟ್ ಮನವಿ ಮಾಡಿತು. ಅದರಂತೆ ನಾವು ವಿಶೇಷ ತನಿಖಾ ತಂಡವನ್ನು ರಚಿಸಿದ್ದೇವೆ. ವಿಶೇಷ ತನಿಖಾ ತಂಡದ ವರದಿ ಬರುತ್ತಿದ್ದಂತೆಯೇ ನಾವು ಕ್ರಮ ಕೈಗೊಂಡಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಆರು ಮಂದಿ ಭಾಗಿಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಇನ್ನಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

