ಜಕರ್ತಾ: ಸಾಂಸ್ಕೃತಿಕ ಪರಂಪರೆಯು ವಿವಿಧ ದೇಶದ ಜನರನ್ನು ಒಂದಾಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯೋಗ್ಯಕರ್ತಾದಲ್ಲಿರುವ ಐತಿಹಾಸಿಕ ಪ್ರಂಬನನ್ ದೇವಾಲಯ ಸಂಕೀರ್ಣವನ್ನು ಸಂರಕ್ಷಿಸಿಟ್ಟುಕೊಂಡಿರುವುದಕ್ಕಾಗಿ ಇಂಡೊನೇಷ್ಯಾ ಜನತೆಗೆ ಮೋದಿ ಧನ್ಯವಾದ ಅರ್ಪಿಸಿದ್ದಾರೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಪ್ರಂಬನನ್ ದೇವಾಲಯದ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಗೆ ಪ್ರಧಾನಿ ಮೋದಿ ಹಾಗೂ ಇಂಡೊನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಜಂಟಿಯಾಗಿ ಚಾಲನೆ ನೀಡಿದರು.
ಹಿಮ ಕರಗುತ್ತಿದ್ದಂತೆ ಆರ್ಕ್ಟಿಕ್ ಸಮುದ್ರದ ತಳದಲ್ಲಿ ಜೀವ ವೈವಿಧ್ಯ ಹೆಚ್ಚಳ!
ಈ ಯೋಜನೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಮುಖ ಪಾತ್ರ ವಹಿಸಲಿದೆ.
10ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಪ್ರಂಬನನ್ ದೇವಾಲಯವು ಇಂಡೊನೇಷ್ಯಾದ ಅತ್ಯಂತ ದೊಡ್ಡ ಹಿಂದೂ ದೇವಾಲಯವಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿ ಶಿವ, ವಿಷ್ಣು, ಬ್ರಹ್ಮ ಮತ್ತು ಗಣೇಶ, ದುರ್ಗೆಯ ವಿಗ್ರಹಗಳಿದ್ದು, ರಾಮಾಯಣದ ಮಹಾಕಾವ್ಯವನ್ನು ಬಿಂಬಿಸುವ ಕೆತ್ತನೆಗಳಿವೆ.
ದೇವಾಲಯದಲ್ಲಿ 'ಮಹಾಮೃತ್ಯುಂಜಯ' ಮತ್ತು 'ಓಂ ನಮಃ ಶಿವಾಯ' ಜಪಗಳನ್ನು ಕೇಳಿ ನನ್ನ ಹೃದಯ ಸ್ಪರ್ಶಿಸಿತು ಎಂದು ಮೋದಿ ಹೇಳಿದ್ದಾರೆ.
'ಇಲ್ಲಿನ ಗಾಳಿಯಲ್ಲಿ ಸಾಂಸ್ಕೃತಿಕ ಸುಗಂಧವಿದೆ. ಅದೇ ಸುಗಂಧವನ್ನು ನಾವು ಭಾರತದ ಮಣ್ಣಿನಲ್ಲೂ ಪ್ರತಿ ಕ್ಷಣ ಅನುಭವಿಸುತ್ತೇವೆ. ಈ ಸಾಂಸ್ಕೃತಿಕ ಪರಂಪರೆಯೇ ನಮ್ಮನ್ನು ಬೆಸೆಯುವುದು' ಎಂದು ಮೋದಿ ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಅವರ ಮೂರು ದೇಶಗಳ ಪ್ರವಾಸದ (ಇಂಡೊನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್) ಮೊದಲ ಭಾಗವಾಗಿ ಈ ಭೇಟಿ ಆಗಿದ್ದು, ಇದರ ಮುಂದಿನ ಹಂತವಾಗಿ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

