ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿಗಳೊಂದಿಗೆ ಸ್ವದೇಶಕ್ಕೆ ಮರಳಿ, ನ್ಯಾಯಾಲಯಕ್ಕೆ ಶರಣಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ, ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
2024ರಲ್ಲಿ ನಡೆದ ವಿದ್ಯಾರ್ಥಿ ದಂಗೆಯ ಬಳಿಕ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ಈ ದಂಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವಿಶೇಷ ನ್ಯಾಯಾಲಯವು ಅವರ ಗೈರುಹಾಜರಿಯಲ್ಲಿಯೇ ಮರಣದಂಡನೆ ವಿಧಿಸಿದೆ. ಅಲ್ಲದೆ, ಅವರ ನೇತೃತ್ವದ 'ಅವಾಮಿ ಲೀಗ್' ಪಕ್ಷವನ್ನು ದೇಶದಲ್ಲಿ ನಿಷೇಧಿಸಲಾಗಿದೆ.
'ಪ್ರಾಣದ ಹಂಗು ತೊರೆದು ಸ್ವದೇಶಕ್ಕೆ'
ಸ್ವದೇಶಕ್ಕೆ ಮರಳಿದಾಗ ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು. ಆದರೂ ನಾನು ದೇಶಕ್ಕೆ ಮರಳಲಿದ್ದೇನೆ. ಸಾವು ಬರುವುದಾದರೆ ನನ್ನ ಹೆತ್ತವರ ರಕ್ತ ಚೆಲ್ಲಿದ ಸ್ವಂತ ಮಣ್ಣಿನಲ್ಲೇ ಬರಲಿ ಎಂದು ಹಸೀನಾ ಭಾವುಕರಾಗಿ ನುಡಿದಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಅವರು, 'ನಾನು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇನೆ. ಕೋರ್ಟ್ ಕಲಾಪಗಳು ಪ್ರಾರಂಭವಾದರೆ, ನಡೆಯುತ್ತಿರುವ ಕಾನೂನು ಪ್ರಕ್ರಿಯೆ ಎಷ್ಟು ಹಾಸ್ಯಾಸ್ಪದವಾಗಿದೆ ಎಂಬುದು ಜನರಿಗೆ ಅರ್ಥವಾಗುತ್ತದೆ. ಅದನ್ನು ನಾನು ಸಾಬೀತುಪಡಿಸಲು ಬಯಸುತ್ತೇನೆ' ಎಂದಿದ್ದಾರೆ.
ಬೀದಿ ವ್ಯಾಪಾರಿಗಳ ಅನ್ನ ಕಸಿಯಬೇಡಿ: ತೆರವು ಕಾರ್ಯಾಚರಣೆ ಟೀಕಿಸಿದ ವಿಜಯೇಂದ್ರ ಸ್ಪೇನ್ನಲ್ಲಿ ಕಾಡ್ಗಿಚ್ಚು: 11 ಸಾವು, 19 ಮಂದಿ ನಾಪತ್ತೆ
ಹಸೀನಾ ಅವರಿಗೆ ಆಶ್ರಯ ನೀಡಿರುವುದು ಬಾಂಗ್ಲಾದೇಶ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ. ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾ ಸರ್ಕಾರವು ಭಾರತಕ್ಕೆ ನಿರಂತರವಾಗಿ ಪತ್ರ ಬರೆಯುತ್ತಿದೆ.
ಆದರೆ, ಈ ನಿರ್ಧಾರದ ಕುರಿತು ತಾವು ಯಾವುದೇ ವಿದೇಶಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಹಸೀನಾ ಸ್ಪಷ್ಟಪಡಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಈಗಾಗಲೇ ದೇಶದಲ್ಲಿ ಅವಾಮಿ ಲೀಗ್ ಪಕ್ಷದ ಪುನರ್ ರಚನೆಗಾಗಿ ಆನ್ಲೈನ್ ಮೂಲಕ ಸಭೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿರುವ ಅವರು, ಜೈಲು ವಾಸಕ್ಕೆ ತಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಹಸೀನಾ ಅವರ ಈ ದಿಢೀರ್ ನಿರ್ಧಾರವು ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಶೇಖ್ ಹಸೀನಾಸುದೀರ್ಘ ಆಡಳಿತಾವಧಿಯಲ್ಲಿ ತಪ್ಪುಗಳು ಸಹಜ. ಆದರೆ ಸರ್ಕಾರದ ಒಪ್ಪು-ತಪ್ಪುಗಳನ್ನು ನಿರ್ಣಯಿಸುವ ಹಕ್ಕು ಜನರಿಗೆ ಮಾತ್ರ ಸೇರಿದ್ದಾಗಿದೆ. ಆ ತೀರ್ಪನ್ನು ನಾನು ಜನರಿಗೇ ಬಿಡುತ್ತೇನೆ.

