ನವದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಪ್ರಕರಣವೊಂದರ ಸಂಬಂಧ ಕೋರ್ಟ್ನಲ್ಲಿ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರೊಬ್ಬರು ವಿಚಾರಣೆ ವೇಳೆ ನ್ಯಾಯಾಧೀಶರತ್ತ ಕಾಗದಗಳನ್ನು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈಡ್ರಾಮಾ ಮಾಡಿದ್ದಾರೆ.
ಪ್ರಬಲ್ ಪ್ರತಾಪ್ ಕೃತ್ಯ ಎಸಗಿದ ಅರ್ಜಿದಾರ. ಆದಾಗ್ಯೂ, ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಅರಾಧೆ ನೇತೃತ್ವದ ಪೀಠವು ಸಂಯಮ ಕಾಯ್ದುಕೊಂಡಿದ್ದು, ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ನಿರಾಕರಿಸಿದೆ. ಬದಲಾಗಿ, ಅರ್ಜಿದಾರನ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಬಲ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವ ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) 173(4) ಸೆಕ್ಷನ್ ಅಡಿಯಲ್ಲಿ ಅರ್ಜಿಯನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯದ ನಿರ್ಧರಿಸಿತ್ತು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಪ್ರಬಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಕಾನೂನು ಪ್ರಕಾರ ವಾದ ಮಂಡಿಸುವ ಬದಲು ಪ್ರಬಲ್ ಅವರು, 'ನ್ಯಾಯಾಂಗದ ಪ್ರಧಾನ ಸೇವಕರೇ... ಸೈಬರ್ ಅಪರಾಧ ಎಸಗಿರುವ ಲಖನೌ ವಿಕಾಶ್ನಗರದ ಎಸಿಪಿ ಮತ್ತು ಡುಪ್ಲೆಕ್ಸ್ ಟೆಕ್ನಾಲಜಿ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ನಾನು ನಿಮಗೆ ಆದೇಶಿಸುತ್ತಿದ್ದೇನೆ. ಯಾಕೆಂದರೆ ನಾನು ಸಾರ್ವಭೌಮ' ಎಂದು ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ.ವಿಶ್ವನಾಥನ್ ಅವರು, 'ನೀವು ನಮಗೆ ಆದೇಶ ನೀಡುತ್ತಿದ್ದೀರಾ' ಎಂದು ಪ್ರಶ್ನಿಸಿದ್ದರು. ಈ ವೇಳೆ ಪ್ರಬಲ್, ನ್ಯಾಯಮೂರ್ತಿಗಳ ಕಡೆಗೆ ಅರ್ಜಿಗಳನ್ನು ಎಸೆದಿದ್ದು, ಅವಾಚ್ಯವಾಗಿ ನಿಂದಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪ್ರಬಲ್ ಅವರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸಿದರು.
'ಅರ್ಜಿದಾರರ ವಿರುದ್ಧ ಯಾವುದೇ ಕ್ರಮವನ್ನು ನಾವು ಕೈಗೊಳ್ಳುವುದಿಲ್ಲ. ದಾಖಲೆಗಳನ್ನು ಪರಿಶೀಲಿಸಿದ್ದೇವೆ, ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಅರ್ಜಿಯನ್ನು ವಜಾಗೊಳಿಸಿದ್ದೇವೆ' ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದ್ದಾರೆ. 'ಅರ್ಜಿದಾರರು ಹತಾಶೆಯಿಂದ ಈ ರೀತಿ ವರ್ತಿಸಿದ್ದಾರೆ' ಎಂದು ತಿಳಿಸಿದ್ದಾರೆ.
2025ರ ಅಕ್ಟೋಬರ್ 6ರಂದು ವಿಚಾರಣೆಯ ಸಂದರ್ಭದಲ್ಲಿ ವಕೀಲರೊಬ್ಬರು ತಮ್ಮ ಶೂ ಅನ್ನು ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಕಡೆಗೆ ಎಸೆಯಲು ಯತ್ನಿಸಿದ್ದರು.

