ಪೊಲೀಸರ ಪ್ರಕಾರ, ಪ್ರವೇಶ್ ಮತ್ತು ಹಿಮಾಂಶು ಎಂದು ಗುರುತಿಸಲಾದ ಶಂಕಿತ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಅವರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದರು. ಅವರನ್ನು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ತಡರಾತ್ರಿ ಹರ್ಯಾಣ ಪೊಲೀಸ್ ವಿಶೇಷ ಕಾರ್ಯಪಡೆ, ದಿಲ್ಲಿ ಪೊಲೀಸರ ಕೌಂಟರ್-ಇಂಟೆಲಿಜೆನ್ಸ್ ಸ್ಪೆಷಲ್ ಸೆಲ್ನಿಂದ ಪಡೆದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿತ್ತು. ಗುಂಡಿನ ಚಕಮಕಿ ವೇಳೆ ಓರ್ವ ಕಾನ್ಸ್ಟೇಬಲ್ ಕಾಲಿಗೆ ಗುಂಡು ತಗುಲಿದೆ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವೇಶ್ ಮತ್ತು ಹಿಮಾಂಶು ಕಳೆದ ಜೂನ್ 11ರಂದು ಹನ್ಸಿಯಲ್ಲಿ ಜಿಮ್ ಮಾಲಕ ಕಪಿಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು.
ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತನಿಖೆಯ ಸಮಯದಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಬಯಲಾಗಿತ್ತು. ಪ್ರವೇಶ್ ಮತ್ತು ಹಿಮಾಂಶು ಅವರನ್ನು ಪ್ರಮುಖ ಶಂಕಿತರು ಎಂದು ಗುರುತಿಸಲಾಗಿತ್ತು.
ಪ್ರವೇಶ್ ಹಿಸಾರ್ ಜಿಲ್ಲೆಯ ತಿಬ್ಬಾ ದನಾಶೇರ್ ನಿವಾಸಿಯಾಗಿದ್ದು, ಹಿಮಾಂಶು ಜಾಖೋಡ್ ಖೇರಾ ಗ್ರಾಮದವನಾಗಿದ್ದಾನೆ ಎಂದು ತಿಳಿದು ಬಂದಿದೆ.

