ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಬ್ಯಾಂಕ್ ಖಾತೆಗಳಲ್ಲಿರುವ ₹440 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕ್ರಮವನ್ನು ರಾಜ್ಯಸಭಾ ಸಂಸದ ಡೆರೆಕ್ ಒಬ್ರಯಾನ್ ಪ್ರಶ್ನಿಸಿದ್ದಾರೆ.
'ಎಚ್ಡಿಎಫ್ಸಿ ಬ್ಯಾಂಕ್ನಲ್ಲಿರುವ ಟಿಎಂಸಿಯ 3 ಬ್ಯಾಂಕ್ ಖಾತೆಗಳನ್ನು ಇ.ಡಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ಆದೇ ರೀತಿ ಅವರು (ಇ.ಡಿ ಅಧಿಕಾರಿಗಳು) ಅಯೋಧ್ಯೆಯ ರಾಮಮಂದಿರದಲ್ಲಿ ಕಳವು ಆಗಿರುವ ದೇಣಿಗೆ ಹಣವನ್ನು ಯಾವಾಗ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ' ಎಂದು ಡೆರೆಕ್ ಕಿಡಿಕಾರಿದ್ದಾರೆ.
ರಾಮಮಂದಿರದ ದೇಣಿಗೆ ನಿರ್ವಹಣಾ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಿಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ಡೆರೆಕ್ ಧ್ವನಿಗೂಡಿಸಿದ್ದಾರೆ.
ಟಿಎಂಸಿ ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ ₹440 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯವು ಬುಧವಾರ ಆದೇಶಿಸಿತ್ತು.
ಹಣ ದುರಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅನ್ವಯ ಈ ಕ್ರಮ ಕೈಗೊಳ್ಳಲು ಇ.ಡಿ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಮೂರು ಖಾಸಗಿ ಬ್ಯಾಂಕ್ಗಳಲ್ಲಿ ಟಿಎಂಸಿ ಖಾತೆ ಹೊಂದಿದ್ದು, ಅದರಲ್ಲಿ ಒಟ್ಟು ₹440.42 ಕೋಟಿ ಹಣವಿದೆ. ಇದರ ಮೂಲದ ಕುರಿತು ಶಂಕೆ ವ್ಯಕ್ತವಾಗಿದ್ದ ಕಾರಣ ಇತ್ತೀಚೆಗಷ್ಟೇ ಕೋಲ್ಕತ್ತದ ಐದು ಪ್ರದೇಶಗಳಲ್ಲಿ ಇ.ಡಿ ಶೋಧ ನಡೆಸಿತ್ತು ಎಂಬುದು ಗಮನಾರ್ಹ.

