ಕಾಸರಗೋಡು: ಕಳೆದ ಕೆಲವು ದಿವಸಗಳಿಂದ ಮಳೆ ಬಿರುಸುಪಡೆದುಕೊಳ್ಳುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ಸಮುದ್ರ ಕೊರೆತ ಭೀತಿ ಎದುರಾಗಿದೆ. ಕಾಸರಗೋಡು ಸನಿಹದ ಚೇರಂಗೈ ಕಡಪ್ಪುರದಲ್ಲಿ ಸಮುದ್ರ ಕೊರೆತ ಹೆಚ್ಚಾಗಿದ್ದು, ಇದರಿಂದ ಸನಿಹದ ರಸ್ತೆ ಬಹುತೇಕ ಸಮುದ್ರಪಾಲಾಗಿದೆ. ಈ ಪ್ರದೇಶದಲ್ಲಿದ್ದ ಹಲವು ತೆಂಗಿನ ಮರಗಳು ಬುಡಸಹಿತ ಮುಗುಚಿ ಬಿದ್ದು, ಸಮುದ್ರ ಪಾಲಾಗಿದೆ.
ಸಿಪಿಸಿಆರ್ಐ ಬಳಿಯಿರುವ ಸಮುದ್ರ ಕಿನಾರೆಯ ರಸ್ತೆಯನ್ನು ಸಮುದ್ರ ಭಾಗಶಃ ಆಕ್ರಮಿಸಿದ್ದು, ಸಮುದ್ರಕೊರೆತ ಮುಂದುವರಿಯುತ್ತಿದ್ದು. ಅತಿಯಾದ ಸಮುದ್ರ ಕೊರೆತದಿಂದ ಈ ಪ್ರದೇಶದ ಜನತೆಗೆ ನಿದ್ದೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಮೂರು ವರ್ಷಗಳ ಹಿಂದೆಯೂ ಚೇರಂಗೈಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಈ ವೇಳೆ ಹಲವು ಮನೆಗಳು ಹಾಗೂ ತೆಂಗಿನ ಮರಗಳು ಕುಸಿದು ಬಿದ್ದು ಭಾರೀ ನಾಶನಷ್ಟ ಉಂಟಾಗಿತ್ತು. ಕಡಲ್ಕೊರೆತ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಕಲ್ಲುಗಳನ್ನು ತಂದಿಳಿಸಲಾಗಿತ್ತಾದರೂ, ಇವೆಲ್ಲವೂ ಸಮುದ್ರಗರ್ಭ ಸೇರಿಕೊಂಡಿದೆ. ಕಗ್ಗಲ್ಲಿನ ಬದಲು ಈ ಪ್ರದೇಶದಲ್ಲಿ ಮರಳಿನ ಚೀಲದ ತಡೆಗೋಡೆ ನಿರ್ಮಿಸಲಾಗಿತ್ತು. ಮಳೆ ಇನ್ನಷ್ಟು ಬಿರುಸುಗೊಂಡಲ್ಲಿ ಸಮುದ್ರಕೊರೆತ ಹೆಚ್ಚಾಗಿ ಈ ಪ್ರಪ್ರದೇಶದಲ್ಲಿ ಭಾರೀ ನಾಶನಷ್ಟ ಉಂಟಾಗುವ ಸಾಧ್ಯತೆ ಇದೆ.



