ಅಯೋಧ್ಯೆ: ರಾಮಮಂದಿರ 'ದೇಣಿಗೆ ಕಳವು ಕುರಿತು ನನ್ನ ವಿರುದ್ಧದ ಎಲ್ಲ ಆರೋಪಗಳಿಗೆ, ವಿಶೇಷ ತನಿಖಾ ತಂಡವು(ಎಸ್ಐಟಿ) ಅಂತಿಮ ವರದಿ ನೀಡಿದ ಬಳಿಕ ಉತ್ತರಿಸುತ್ತೇನೆ' ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನಕಾರ್ಯದರ್ಶಿ ಚಂಪತ್ ರಾಯ್ ಅವರು ಮಂಗಳವಾರ ಹೇಳಿದ್ದಾರೆ.
ರಾಮಮಂದಿರ ಭಕ್ತರನ್ನು ಉದ್ದೇಶಿಸಿ ಲಿಖಿತ ಪತ್ರ ಬರೆದಿರುವ ಅವರು, 'ಎಲ್ಲ ಆರೋಪಗಳು ಆಧಾರರಹಿತವಾದದ್ದು' ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಅವರು ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ
ಪತ್ರದಲ್ಲೇನಿದೆ?
2026ರ ಜೂನ್ನಿಂದ ಶ್ರೀರಾಮ ಮಂದಿರದ ಸಂಕೀರ್ಣದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ಕಳ್ಳತನದ ಬಗ್ಗೆ ಹಲವು ರೀತಿಯ ವದಂತಿಗಳು ಮತ್ತು ಚರ್ಚೆಗಳು ಹರಿದಾಡುತ್ತಿವೆ. ಅನೇಕರು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಆರೋಪಗಳ ವಿರುದ್ಧ ನಾನು 'ಮೌನ ಧರಣಿ'ಯನ್ನು ನಡೆಸುತ್ತಿದ್ದೇನೆ. ಎಸ್ಐಟಿಯ ಪ್ರಾಥಮಿಕ ವರದಿಯನ್ನು ಟ್ರಸ್ಟ್ನ ಸಭೆಗೆ ಮುಂಚಿತವಾಗಿ ನೀಡಲಾಗಿತ್ತು. ಅತ್ಯಂತ ರಹಸ್ಯವಾದದ್ದು ಎನ್ನಲಾದ ವರದಿಯನ್ನು ಬಳಿಕ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ. ಸಂಪೂರ್ಣ ಸತ್ಯ ಶೀಘ್ರದಲ್ಲೇ ಹೊರಬರಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಚಂಪತ್ ರಾಯ್ ಟ್ರಸ್ಟ್ನ ಸದಸ್ಯರಾಗಿ ಉಳಿದಿಲ್ಲ'
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಮತ್ತು ಸದಸ್ಯರಾಗಿದ್ದ ಅನಿಲ್ ಮಿಶ್ರಾ ಅವರನ್ನು ಟ್ರಸ್ಟ್ನಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ. 'ಸೋಮವಾರ ನಡೆದ ಟ್ರಸ್ಟ್ನ ಸಭೆಯಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅವರು ಈಗ ಟ್ರಸ್ಟ್ನ ಸದಸ್ಯರಲ್ಲ ಮತ್ತು ಯಾವುದೇ ರೀತಿಯಲ್ಲೂ ಟ್ರಸ್ಟ್ನ ಭಾಗವಾಗಿ ಉಳಿದಿಲ್ಲ. ' ಎಂದು ಟ್ರಸ್ಟ್ನ ಖಜಾಂಚಿ ಗೋವಿಂದ ದೇವ್ ಗಿರಿ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಟ್ರಸ್ಟ್ನ ವಿಶೇಷ ಆಹ್ವಾನಿತ ಸದಸ್ಯ ಸ್ಥಾನದಿಂದ ಗೋಪಾಲ ನಾಗರಕಟ್ಟೆ ಅವರನ್ನೂ ಕೈಬಿಟ್ಟಿರುವುದಾಗಿ ಗಿರಿ ಅವರು ತಿಳಿಸಿದ್ದಾರೆ. ಗೋಪಾಲ್ ಅವರು ಕರ್ನಾಟಕದವರು.

