ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ ಬಾಲಕ, ಬೇಡಡ್ಕ ತಲೆಕುನ್ನು ನಿವಾಸಿ ಮುಹಮ್ಮದ್ ರಿಯಾಸ್ ಸಾವಿಗೆ ಹೃದಯಾಘಾತ ಕಾರಣವೆಂದು ಶವಮಹಜರು ಪ್ರಾಥಮಿಕ ವರದಿ ತಿಳಿಸಿದೆ. ಇದೇ ವೇಳೆ ಶಸ್ತ್ರಚಿಕಿತ್ಸೆ ವೇಳೆ ಯಾವುದೇ ಲೋಪ ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ತನಿಖಾಧಿಕಾರಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ವೈದ್ಯರ ನಿರ್ಲಕ್ಷ್ಯ ಹಾಗೂ ಶಸ್ತ್ರಚಿಕಿತ್ಸೆಯ ಲೋಪದಿಂದ ಬಾಲಕ ಮೃತಪಟ್ಟಿರುವುದಾಗಿ ಆರೋಪಿಸಿ ಹೆತ್ತವರು ಪೆÇಲೀಸರಿಗೆ ದೂರು ನೀಡಿದ್ದರು. ಇದೇ ಕಾರಣ ಮುಂದೊಡ್ಡಿ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಆಸ್ಪತ್ರೆ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದು ಉನ್ನತಮಟ್ಟದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಉದರ ಸಂಬಂಧಿ ಕಾಯಿಲೆಯನ್ವಯ ಬೇಡಡ್ಕ ತಲೇಕುನ್ನು ನಿವಾಸಿ ಅಶ್ರಫ್ ಸಖಾಫಿ-ಬುಷ್ರಾ ದಂಪತಿ ಪುತ್ರ ಮುಹಮ್ಮದ್ ಇಯಾಸ್ನನ್ನು ಬುಧವಾರ ಬೆಳಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಬಾಲಕನ ನಾಡಿಮಿಡಿತ ಗಣನೀಯವಾಗಿ ಕುಸಿದಿದ್ದು, ಮಧ್ಯಾಹ್ನದ ವೇಳೆಗೆ ಸಾವು ಸಂಭವಿಸಿತ್ತು. ಈ ಬಗ್ಗೆ ಕಾಸರಗೋಡು ನಗರಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು.

