ಕಾಸರಗೋಡು: ರಾಜ್ಯದಲ್ಲಿ ಉಭಯ ರಂಗಗಳು ಕಳೆದ ಹಲವು ದಶಕಗಳಿಂದ ಅದಲುಬದಲಾಗಿ ಆಡಳಿತ ನಡೆಸುತ್ತಾ ಬಂದಿದ್ದರೂ, ಕೇರಳದ ಮೀನುಗಾರರ ದುಸ್ಥಿತಿಗೆ ಪರಿಹಾರ ಕಂಡುಕೊಳ್ಳದೆಅವರನ್ನು ವಂಚಿಸುತ್ತಾ ಬಂದಿರುವುದಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಅವರು ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಕಾಸರಗೋಡು ಮೀನುಗಾರಿಕಾ ಕಚೇರಿ ಎದುರು ಆಯೋಜಿಸಿದ್ದ ಧರಣಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಎಡರಂಗ ಅಥವಾ ಐಕ್ಯರಂಗ ಆಡಳಿತ ನಡೆಸಿದರೂ, ಕೇರಳದ ಮೀನುಗಾರರಿಗೆ ಟ್ರೋಲಿಂಗ್ ನಿಷೇಧ ಕಾಲಾವಧಿಯಲ್ಲಿ ಪೆನ್ಷನ್ ಹಾಗೂ ರೇಷನ್ ವಿಳಂಬವಾಗುತ್ತಿರುವುದು ಸಾಮಾನ್ಯವಾಗಿದೆ. ಮೀನುಗಾರರ ಬಗ್ಗೆ ಮೊಸಳೆಕಣ್ಣೀರು ಸುರಿಸುತ್ತಿರುವ ಉಭಯ ರಂಗಗಳು, ಅವರ ಜೀವನ ಮಟ್ಟ ಸುಧಾರಿಸುವ ಯಾವುದೇ ಮಹತ್ವದ ಯೋಜನೆ ಜಾರಿಗೆ ತರುತ್ತಿಲ್ಲ. ಜಿಲ್ಲೆಯ ನಾನಾ ಕಡೆ ಸಮುದ್ರ ಕೊರೆತದಿಂದ ಅನುಭವಿಸುತ್ತಿರುವ ಸಂಕಷ್ಟದ ಬದುಕಿನ ಬಗ್ಗೆಯೂ ಚಕಾರವೆತ್ತುತ್ತಿಲ್ಲ.
ಆಧುನಿಕ ತಂತ್ರಜ್ಞಾನ ಸಹಾಯದಿಂದ ನರೇಂದ್ರ ಮೋದಿ ಸರ್ಕಾರವು ಮೀನುಗಾರರ ಸುರಕ್ಷತೆ ಮತ್ತು ಕಲ್ಯಾಣವನ್ನು ಜಾರಿಗೊಳಿಸುತ್ತಿದ್ದರೆ, ರಾಜ್ಯ ಸರ್ಕಾರಕ್ಕೆ ಅವರಿಗೆ ಸಿಗಬೇಕಾದ ಅರ್ಹ ಸೌಲಭ್ಯಗಳನ್ನು ಸಹ ಖಾತ್ರಿಪಡಿಸಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ತಿಳಿಸಿದರು.
ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕೆ.ಪಿ. ವತ್ಸರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಗೀಶ್ ಪೂರಾಡನ್, ಕೆ. ಶೈಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಟಿ.ವಿ. ಮುರಳಿ ಕುಮಾರ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕೆ.ಎಸ್. ರಮಣಿ, ಒಬಿಸಿ ಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷರಾದ ಅಶೋಕ್ ಚೆಟ್ಟಿಯಾರ್ ಉಪಸ್ಥಿತರಿದ್ದರು.



