ಕಾಸರಗೋಡು: ಕೇರಳದಲ್ಲಿ ಬಿಜೆಪಿ ಗೆಲುವಿನೊಂದಿಗೆ ಪಕ್ಷ ತೃತೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿರುವುದಾಗಿ ಬಿಜೆಪಿ ರಾಜ್ಯ ಕೋಶ ಸಂಯೋಜಕ ವಿ.ಕೆ. ಸಜೀವನ್ ಹೇಳಿದರು. ಅವರು ಬಿಜೆಪಿ ಉದುಮ ಸಂಘಟನಾ ಮಂಡಲ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ ಐಕ್ಯರಂಗ ಅಧಿಕಾರಕ್ಕೇರಿ ತಿಂಗಳುಗಳು ಕಳೆದರೂ, ಸರ್ಕಾರ ಅಭಿವೃದ್ಧಿಕಾರ್ಯಗಳ ಬಗ್ಗೆ ಇನ್ನೂ ಗಮನಹರಿಸಿಲ್ಲ. ಕೇವಲ ಭರವಸೆಗಳಿಗೆ ಸೀಮಿತವಾಗಿರುವ ಸರ್ಕಾರ, ಚುನಾವಣಾ ಪೂರ್ವದಲ್ಲಿ ನೀಡಿರುವ ಗ್ಯಾರಂಟಿಗಳಿಗೆ ಹಣ ಹೊಂದಾಣಿಕೆ ಮಾಡಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬದಲಾಗಿದ್ದರೂ, ಈ ಹಿಂದಿನ ಎಡರಂUದ ಆಡಳಿತ ಶೈಲಿಯೇ ರಾಜ್ಯದಲ್ಲಿ ಮುಂದುವರಿದಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ವಯ ಮಾಸಿಕ 3ಸಾವಿರ ಪಿಂಚಣಿ ಮತ್ತು ವಿದ್ಯಾರ್ಥಿಗಳಿಗೆ 1ಸಾವಿರ ರೂ. ಭತ್ತೆ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿರುವುದಾಗಿ ದೂರಿದ ಅವರು, ಉಭಯ ರಂಗಗಳು ರಾಜ್ಯದ ಜನತೆಯನ್ನು ವಂಚಿಸುತ್ತಾ ಬಂದಿರುವ ತಂತ್ರ ಇನ್ನು ಮುಂದೆ ಫಲಿಸದು ಎಂದು ತಿಳಿಸಿದರು.
ಉದುಮ ಕ್ಷೇತ್ರ ಸಮಿತಿ ಅಧ್ಯಕ್ಷೆ ಶೈನಿಮೋಲ್ಶಶಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್. ಬಾಬುರಾಜ್, ಮನು ಲಾಲ್ ಮೇಲತ್, ಕಾರ್ಯದರ್ಶಿಗಳಾದ ಮಹೇಶ್ ಗೋಪಾಲ್, ಕೆ.ಟಿ. ಪುರುಷೋತ್ತಮನ್, ಮಾಧ್ಯಮ ಸಂಚಾಲಕ ವೈ. ಕೃಷ್ಣದಾಸ್ ಉಪಸ್ಥಿತರಿದ್ದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಎ.ಎಂ. ಮುರಳೀಧರನ್ ಸ್ವಾಗತಿಸಿದರು. ಪ್ರದೀಪ್ ಎಂ. ಕೂಟ್ಟಕ್ಕನಿ ವಂದಿಸಿದರು.



