ಕಾಸರಗೋಡು: ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗದ ಜಿಲ್ಲಾಮಟ್ಟದ ಅದಾಲತ್ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ಕೆ.ಬಿ. ಮೋಹನ್ ಕುಮಾರ್ ನೇತೃತ್ವದಲ್ಲಿ ಅದಾಲತ್ ನಡೆಯಿತು. ರಾಜ್ಯ ಮಕ್ಕಳ ಹಕ್ಕು ಆಯೋಗದ ಜಿಲ್ಲಾ ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಆಯೋಗವು ಪರಿಗಣಿಸಿದ ಒಟ್ಟು 30 ದೂರುಗಳಲ್ಲಿ 20 ದೂರುಗಳಿಗೆ ಅದಾಲತ್ನಲ್ಲಿ ಪರಿಹಾರ ಕಲ್ಪಿಸಲಾಯಿತು. ಉಳಿದ 10 ಪ್ರಕರಣಗಳನ್ನು ಆಯೋಗದ ನಿರ್ದೇಶ ಮತ್ತು ಆದೇಶಗಳನ್ನು ಹೊರಡಿಸುವ ನಿಟ್ಟಿನಲ್ಲಿ ಮೀಸಲಿಡಲಾಯಿತು.
ಚೆಂಬರಿಕಾದ ಜಿಎಲ್ಪಿ ಶಾಲೆಯ ಆವರಣ ಗೋಡೆಯನ್ನು ರಾಜ್ಯ ಉಚ್ಛ ನ್ಯಾಯಾಲಯದ ಆದೇಶದನ್ವಯ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ ಆಯೋಗ ಚೆಮ್ನಾಡ್ ಪಂಚಾಯಿತಿ ಕಾರ್ಯದರ್ಶಿಗೆ ನಿರ್ದೇಶನ ನೀಡಿತು. ಅದ್ರುಗುಳಿ ಜಿಎಲ್ಪಿ ಶಾಲೆಯ ಜಮೀನನ್ನು ಮತ್ತೊಬ್ಬ ವ್ಯಕ್ತಿಗೆ ಹಂಚಿಕೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದ ದೂರಿನ ಕುರಿತು, ಆ ಜಮೀನಿನ ಸಮೀಕ್ಷೆ ನಡೆಸಿ, ಶಾಲೆಯ ಒಡೆತನಕ್ಕೆ ಸೇರಬೇಕಾದ ಭಾಗವನ್ನು ಮರುವಶಮಾಡಿಕೊಂಡಿರುವ ಬಗ್ಗೆ ತಹಸೀಲ್ದಾರ್ ಅವರು ಆಯೋಗಕ್ಕೆ ವರದಿಯನ್ನು ಸಲ್ಲಿಸಿದರು.
ಮಕ್ಕಳ ಹಕ್ಕುಗಳ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ.ಸಿ. ಅಭಿಲಾಷ್, ಆಯೋಗದ ಸಿಬ್ಬಂದಿ ತುಷಾರ ಮೋಹನ್, ಎಸ್. ಅರುಣ್ಕುಮಾರ್, ಕಂದಾಯ, ಪೆÇಲೀಸ್, ಆರೋಗ್ಯ ಮತ್ತು ಮಕ್ಕಳ ರಕ್ಷಣಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



