ಕೋಲ್ಕತ್ತಾ: ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ಗಳು ಭಾರತೀಯ ಪೌರತ್ವಕ್ಕೆ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಅಳಿಸಲ್ಪಟ್ಟ ಬಳಿಕ ಬಂಧನ ಕೇಂದ್ರದಲ್ಲಿ ಇರಿಸಲಾಗಿರುವ ನಾಸಿರ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ದೇಬಾಂಗ್ಸು ಬಸಕ್ ಹಾಗೂ ಅಜಯ್ ಕುಮಾರ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠವು, 'ವಲಸೆ ಮತ್ತು ವಿದೇಶಿಯರ ಕಾಯ್ದೆ-2025'ರ ಪ್ರಕಾರ ಪೌರತ್ವಕ್ಕೆ ಸಂಬಂಧಿಸಿದ ಪುರಾವೆ ಒದಗಿಸುವ ಕಾನೂನುಬದ್ಧ ಹೊಣೆಗಾರಿಕೆಯನ್ನು ಅರ್ಜಿದಾರರು ಮತ್ತು ಬಂಧಿತರು ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಹೀಗಾಗಿ ಅಧಿಕಾರಿಗಳು ಕೈಗೊಂಡ ಕ್ರಮದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ನಾಸಿರ್ ಅವರ ಸೋದರನ ಮಗ ಎಂದು ಹೇಳಿಕೊಂಡ ಸುಮನ್ ಮೊಲ್ಲಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಪಶ್ಚಿಮ ಬಂಗಾಳದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIಖ) ವೇಳೆ ಮತದಾರರ ಪಟ್ಟಿಯಿಂದ ನಾಸಿರ್ ಅವರ ಹೆಸರನ್ನು ಅಳಿಸಲಾಗಿದೆ. ಆ ಕ್ರಮದ ವಿರುದ್ಧ ಮೇಲ್ಮನವಿ ಬಾಕಿ ಇದ್ದರೂ, ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ವಾದಿಸಲಾಗಿತ್ತು.
ನಾಸಿರ್ ಭಾರತೀಯ ಪ್ರಜೆ, ವಿದೇಶಿ ಪ್ರಜೆಯಲ್ಲ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಅವರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಆದಾಯ ತೆರಿಗೆ ಇಲಾಖೆ ನೀಡಿದ ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ ಅನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರು.
ಆದರೆ, ಮತದಾರರ ಗುರುತಿನ ಚೀಟಿಯು ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿತಾಗಿದೆ ಎಂಬುದನ್ನು ಮಾತ್ರ ದೃಢಪಡಿಸುತ್ತದೆ. ಅದು ಭಾರತೀಯ ಪೌರತ್ವಕ್ಕೆ ನಿರ್ಣಾಯಕ ಪುರಾವೆಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಇದೇ ರೀತಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ಗಳೂ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳಲ್ಲ ಎಂದು ಪೀಠ ಹೇಳಿತು.
2026ರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಾಸಿರ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿತು. ಬ್ಯಾಂಕ್ ಖಾತೆ ತೆರೆಯುವುದರಿಂದ ಮಾತ್ರ ವ್ಯಕ್ತಿ ಭಾರತೀಯ ಪ್ರಜೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದೂ ತಿಳಿಸಿತು.
ಅರ್ಜಿದಾರರಾಗಲಿ ಅಥವಾ ಬಂಧಿತರಾಗಲಿ ನಾಸಿರ್ ಅವರ ಭಾರತೀಯ ಪೌರತ್ವವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅಧಿಕಾರಿಗಳು ಕೈಗೊಂಡ ಕ್ರಮದಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯ ನಿರಾಕರಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿತು.
ಮೇ 2, 2025ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯ ಅನ್ವಯ ಜೂನ್ 18, 2026ರಂದು ನಾಸಿರ್ ಅವರನ್ನು ಬಂಧಿಸಲಾಗಿದ್ದು, ಅವರು ಪ್ರಸ್ತುತ ಬಂಧನ ಕೇಂದ್ರದಲ್ಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಸುತ್ತೋಲೆಯ ಪ್ರಕಾರ, ಬಂಧಿತ ವ್ಯಕ್ತಿಗೆ ತನ್ನ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು 60 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಜುಲೈ 20ರಂದು ತೀರ್ಪು ಪ್ರಕಟಿಸುವ ವೇಳೆಯವರೆಗೆ ನಾಸಿರ್ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಸಲ್ಲಿಸಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಿಗೆ ನಾಸಿರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ನ್ಯಾಯಾಲಯ ಅವಕಾಶ ನೀಡಿತು. ಈ ಸೌಲಭ್ಯವನ್ನು ರಾಜ್ಯ ಸರಕಾರ ಕಲ್ಪಿಸಿತ್ತು. ಸಂಭಾಷಣೆ ವೇಳೆ ತಮ್ಮ ಪೋಷಕರು ಭಾರತದಲ್ಲೇ ಮೃತಪಟ್ಟಿದ್ದಾರೆ ಎಂದು ನಾಸಿರ್ ತಿಳಿಸಿದರು.
ಆದರೆ, ತಮ್ಮ ಪೋಷಕರನ್ನು ಎಲ್ಲಿ ಸಮಾಧಿ ಮಾಡಲಾಗಿದೆ ಎಂಬುದನ್ನು ನಾಸಿರ್ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಗಮನಿಸಿತು.
"ಬಂಧಿತನ ಪೋಷಕರು ಭಾರತದಲ್ಲೇ ಮೃತಪಟ್ಟಿದ್ದಾರೆ ಎಂಬುದನ್ನು ದೃಢಪಡಿಸಲು, ರಿಟ್ ಅರ್ಜಿದಾರರು ಒಪ್ಪಿದರೆ ಅವರ ಮೃತದೇಹಗಳೊಂದಿಗೆ ಡಿಎನ್ಎ ಪರೀಕ್ಷೆ ನಡೆಸಲು ನಿರ್ದೇಶಿಸಬಹುದೇ ಎಂದು ನಾವು ವಿಚಾರಿಸಿದ್ದೇವೆ" ಎಂದು ಪೀಠವು ಹೇಳಿತು.
ಆದರೆ, ಬಂಧಿತ ಮತ್ತು ರಿಟ್ ಅರ್ಜಿದಾರರು ಮೃತದೇಹಗಳು ಇರುವ ಸ್ಥಳವನ್ನು ಗುರುತಿಸಲು ನಿರಾಕರಿಸಿದ್ದರಿಂದ, ಬಂಧಿತನ ಪೋಷಕರು ಭಾರತೀಯ ನಾಗರಿಕರು ಎಂಬ ವಾದದ ಬಗ್ಗೆ ಪ್ರತಿಕೂಲ ತೀರ್ಮಾನಕ್ಕೆ ಬರಬೇಕಾಯಿತು ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರು ಶುದ್ಧ ಮನಸ್ಸಿನಿಂದ ನ್ಯಾಯಾಲಯದ ಮೊರೆ ಹೋಗಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು. ಪೊಲೀಸರಿಗೆ ಸಲ್ಲಿಸಿದ್ದ ಲಿಖಿತ ದೂರಿನಲ್ಲಿ ತಾನು ನಾಸಿರ್ ಅವರ ಸಂಬಂಧಿ ಎಂದು ಹೇಳಿದ್ದರೆ, ರಿಟ್ ಅರ್ಜಿಯಲ್ಲಿ ತಾನು ಬಂಧಿತನ ಚಿಕ್ಕಪ್ಪ ಎಂದು ಹೇಳಿಕೊಂಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿತು.
1980ರಲ್ಲಿ ನಾಸಿರ್ ಅವರ ತಂದೆ ಮೃತಪಟ್ಟ ಬಳಿಕ ತಾನೇ ಅವರನ್ನು ಬೆಳೆಸಿದ್ದೇನೆ ಎಂದು ಸುಮನ್ ಮೊಲ್ಲಾ ಅರ್ಜಿಯಲ್ಲಿ ಹೇಳಿದ್ದರು. ಆದರೆ ಅರ್ಜಿದಾರರ ವಯಸ್ಸು 38 ವರ್ಷ ಮತ್ತು ನಾಸಿರ್ ಅವರ ವಯಸ್ಸು 46 ವರ್ಷವಾಗಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯ, ಈ ವಾದವು ನಂಬಲರ್ಹವಲ್ಲ ಎಂದು ಹೇಳಿ ಅದನ್ನು ತಿರಸ್ಕರಿಸಿತು.
ಕೇಂದ್ರ ಸರಕಾರದ ಪರ ಹಾಜರಾದ ವಕೀಲರು, ಜೂನ್ 18, 2026ರಂದು ನಾಸಿರ್ ವಿರುದ್ಧ ಹೊರಡಿಸಲಾದ ಬಂಧನ ಆದೇಶದಲ್ಲಿ ಪೌರತ್ವದ ವಿಚಾರಣೆ, ವಿಚಾರಣೆ ಹಾಗೂ ಪರಿಶೀಲನೆಯ ಬಳಿಕ ಅವರು ಬಾಂಗ್ಲಾದೇಶದ ಪ್ರಜೆ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿರುವುದಾಗಿ ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

