ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ ಅವರಿಗೆ ಸಂಸತ್ತಿನ ಆವರಣದಲ್ಲಿ ಸ್ವಾಗತ ಕೋರಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಹೇಳಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ರಾಜೀನಾಮೆ ನೀಡಿದ ಪ್ರಧಾನ್ ಅವರು ಮುಂಗಾರು ಅಧಿವೇಶನದಲ್ಲಿ ಭಾಗಿಯಾಗಲು ಸಂಸತ್ತಿಗೆ ಆಗಮಿಸಿದ ವೇಳೆ ಬಿಜೆಪಿ ಸಂಸದರು, 'ಪ್ರಧಾನ್ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗುವ ಮೂಲಕ ಸ್ವಾಗತ ಕೋರಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, 'ಇದು ನಾಚಿಕೆಗೇಡು ಎಂದು ನಿಮಗೆ ಅನಿಸುವುದಿಲ್ಲವೇ? ಧರ್ಮೇಂದ್ರ ಪ್ರಧಾನ್ ಅವರು ಯಾವ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಿದರು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಆದರೆ, ನಿನ್ನೆ(ಸೋಮವಾರ) ಸಂಸತ್ತಿನ ಆವರಣದಲ್ಲಿ ಅವರನ್ನು ಯಾವುದೋ ಸೂಪರ್ಸ್ಟಾರ್ ಎಂಬಂತೆ ಸ್ವಾಗತಿಸಲಾಯಿತು' ಎಂದು ಹೇಳಿದ್ದಾರೆ.
'ಮೋದಿ ಸರ್ಕಾರವನ್ನು ಯಾರೂ ನಂಬಲು ಸಾಧ್ಯವಿಲ್ಲ. ಇಂದಿಗೂ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ನೀವು(ಪ್ರಧಾನಿ ಮೋದಿ) ಈ ವಿಷಯವನ್ನು ಬಗೆಹರಿಸಲು ಮಾತುಕತೆ ನಡೆಸಲು ಬಯಸುತ್ತೀರಾ ಅಥವಾ ಇನ್ನೂ ವಿದ್ಯಾರ್ಥಿಗಳ ಬೆನ್ನು ಬಿದ್ದು ಅವರನ್ನು ಹತ್ತಿಕ್ಕಲು ಬಯಸುತ್ತೀರಾ? ಇದು ತಪ್ಪು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಸಂಸತ್ತಿನಲ್ಲಿ ಪ್ರಧಾನ್ ಅವರಿಗೆ ಸಿಕ್ಕ ಸ್ವಾಗತವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಧರ್ಮೇಂದ್ರ ಪ್ರಧಾನ್ ಅವರು ಭ್ರಷ್ಟಾಚಾರ ಮತ್ತು ಭಾರತದ ಹಾಳಾದ ಶಿಕ್ಷಣ ವ್ಯವಸ್ಥೆಯ ಸಂಕೇತವಾಗಿದ್ದಾರೆ. ಅದೇ ವ್ಯವಸ್ಥೆಯು 26 ಮಕ್ಕಳ ಜೀವವನ್ನು ಬಲಿ ತೆಗೆದುಕೊಂಡಿತು ಮತ್ತು ಲಕ್ಷಾಂತರ ಯುವಕರನ್ನು ಬೀದಿಗೆ ಬರುವಂತೆ ಮಾಡಿತು' ಎಂದಿದ್ದಾರೆ.
'ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ, ಬದಲಿಗೆ ಯುವಕರ ಆಕ್ರೋಶದ ಭಯದಿಂದ ರಾಜೀನಾಮೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

