ಭೋಪಾಲ್/ಇಂದೋರ್: ಮಧ್ಯಪ್ರದೇಶ ವಕ್ಫ್ ಮಂಡಳಿಗೆ ಇಬ್ಬರು ಹಿಂದೂ ಸದಸ್ಯರನ್ನು ಸೇರಿಸಿಕೊಂಡು ಪುನರ್ರಚನೆ ಮಾಡಿರುವುದನ್ನು 'ಅನುಚಿತ' ಎಂದು ಕರೆದಿರುವ ಕಾಂಗ್ರೆಸ್, ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.
'ವಕ್ಫ್ ಕಾಯ್ದೆಗೆ ಸಂಬಂಧಿಸಿದ ವಿಷಯವು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದ್ದು, ಅಂತಿಮ ನಿರ್ಧಾರ ಇನ್ನೂ ಪ್ರಕಟಗೊಂಡಿಲ್ಲ.
ಅದಕ್ಕೂ ಮುನ್ನ ಮುಸ್ಲಿಮೇತರ ಸದಸ್ಯರನ್ನು ವಕ್ಫ್ ಮಂಡಳಿಗೆ ನೇಮಕ ಮಾಡಿರುವುದು ಸರಿಯಲ್ಲ, ಇದು ಹಲವು ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ಪ್ರಶ್ನಿಸುತ್ತೇವೆ' ಎಂದು ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಹೇಳಿದ್ದಾರೆ.
'ಹಿಂದೂ-ಮುಸ್ಲಿಂ, ಭಾರತ-ಪಾಕಿಸ್ತಾನ' ವಿಷಯ ಹೊರತುಪಡಿಸಿ, ಆಡಳಿತಾರೂಢ ಬಿಜೆಪಿಗೆ ಬೇರೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಆಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ವಿರುದ್ಧದ ಆರೋಪಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು, ಬಿಜೆಪಿ ವಕ್ಫ್ ಮಂಡಳಿ ಪುನರ್ರಚನೆ ವಿಷಯವನ್ನು ಮುನ್ನೆಲೆಗೆ ತಂದಿದೆ' ಎಂದು ಮಾಜಿ ಸಚಿವ ಪಿ.ಸಿ. ಶರ್ಮಾ ಆರೋಪಿಸಿದ್ದಾರೆ.
'ವಕ್ಫ್ (ತಿದ್ದುಪಡಿ) ಕಾಯ್ದೆ-2025ರ ಅಡಿ, ಮಧ್ಯಪ್ರದೇಶ ವಕ್ಫ್ ಮಂಡಳಿ ಪುನರ್ ರಚಿಸಲಾಗಿದ್ದು, ಹಿಂದೂ ಸದಸ್ಯರನ್ನು ಒಳಗೊಂಡ ಮೊದಲ ರಾಜ್ಯ ಮಟ್ಟದ ವಕ್ಫ್ ಮಂಡಳಿಯಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಭಾನುವಾರ ರಾಜ್ಯ ವಕ್ಫ್ ಮಂಡಳಿಯನ್ನು ಪುನರ್ ರಚಿಸಿದ್ದು, 10 ಸದಸ್ಯರ ಮಂಡಳಿಗೆ ಸನ್ವರ್ ಪಟೇಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮನೋಜ್ ಮಲ್ಪಾನಿ ಮತ್ತು ಅನಿಮೇಶ್ ಭಾರ್ಗವ ಅವರು ವಕ್ಫ್ ಮಂಡಳಿಗೆ ಸೇರ್ಪಡೆ ಯಾಗಿರುವ ಇಬ್ಬರು ಹಿಂದೂ ಸದಸ್ಯರು.
2023ರಲ್ಲೂ ಮಧ್ಯಪ್ರದೇಶ ವಕ್ಫ್ ಮಂಡಳಿಯಲ್ಲಿ ಸನ್ವರ್ ಪಟೇಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈಗ ಪುನರ್ ರಚನೆ ಸಂದರ್ಭದಲ್ಲೂ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ.
ಬಿಜೆಪಿ ಸಮರ್ಥನೆ
'ವಕ್ಫ್ ಮಂಡಳಿಯ ವ್ಯಾಪ್ತಿ ಮಸೀದಿಗೆ ಮಾತ್ರ ಸೀಮಿತವಾಗಿಲ್ಲ, ಹೀಗಾಗಿ ಹಿಂದೂ ಸದಸ್ಯರ ನೇಮಕವನ್ನು ಧರ್ಮದ ದೃಷ್ಟಿಯಿಂದ ಮಾತ್ರ ನೋಡಬಾರದು' ಎಂದು ಬಿಜೆಪಿ ಪ್ರತಿಪಾದಿಸಿದೆ.

