ನವದೆಹಲಿ: ಕೇಂದ್ರ ಸಂಪುಟವು ಶೀಘ್ರದಲ್ಲೇ ಮಹತ್ವದ ಸಂಪುಟ ಪುನಾರಚನೆಗೆ ಸಾಕ್ಷಿಯಾಗಲಿದ್ದು ಗೃಹ ಸಚಿವ ಅಮಿತ್ ಶಾ ಅವರು ಉಪಪ್ರಧಾನಿ ಹುದ್ದೆಗೇರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ವರದಿಯೊಂದು ತಿಳಿಸಿದೆ. ಕೊಂಡು ಸಂಸತ್ನ ಮುಂಗಾರು ಅಧಿವೇಶನಕ್ಕೆ ಮುನ್ನ ಸಂಪುಟ ಪುನಾರಚನೆ ನಡೆಯಲಿದೆ ಎನ್ನಲಾಗಿದೆ.
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಸಂಪುಟ ಪುನಾರಚನೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಪ್ರತಿಪಕ್ಷ ಶಿವಸೇನೆಯನ್ನು ಯಶಸ್ವಿಯಾಗಿ ವಿಭಜಿಸಿದ ಆಪರೇಶನ್ ಟೈಗರ್' ಕಾರ್ಯಾಚರಣೆಯ ಹಿಂದಿರುವ ಮೆದುಳುಗಳಿಗೆ ಸಂಪುಟ ಪುನಾರಚನೆಯಲ್ಲಿ ಪ್ರಾಶಸ್ತ್ಯ ನೀಡುವ ನಿರೀಕ್ಷೆಯಿದೆಯೆಂದು ಮರಾಠಿ ಮಾಧ್ಯಮ ವರದಿಯೊಂದು ತಿಳಿಸಿವೆ.
ಮಹಾರಾಷ್ಟ್ರದ ಶಿವಸೇನಾ (ಶಿಂಧೆ) ಸಂಸದರಾದ ಶ್ರೀಕಾಂತ್ ಏಕನಾಥ್ ಶಿಂಧೆ, ಓಮರಾಜೆ ನಿಂಬಾಳ್ಕರ್ ಹಾಗೂ ಸಂಜಯ್ 'ಬಂಧು' ಜಾಧವ್ ಅವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಎನ್ಡಿಎ ಮೈತ್ರಿಕೂಟನ್ನು ಬಲಪಡಿಸುವಲ್ಲಿ ಶಿವಸೇನಾ (ಶಿಂಧೆ) ದ ಪ್ರಯತ್ನಕ್ಕೆ ಪುರಸ್ಕಾರ ಸೂಚಕವಾಗಿ ಸಚಿವ ಸ್ಥಾನಗಳ್ನು ನೀಡಲಾಗುತ್ತಿದೆ ಎಂದು ಎಂದು ಟಿವಿ9 ಮರಾಠಿ ವಾಹಿನಿಯ ವರದಿ ತಿಳಿಸಿದೆ.
ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಪುತ್ರನಾದ ಶ್ರೀಕಾಂತ ಶಿಂಧೆ ಅವರು ಕಲ್ಯಾಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಅಪರೇಶನ್ ಟೈಗರ್ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಆಗಿದ್ದರು ಎನ್ನಲಾಗಿದೆ. ಈ ಕಾರ್ಯಾಚರಣೆಯ ಪರಿಣಾಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ)ದ ಆರು ಮಂದಿ ಸಂಸದರು, ಶಿವಸೇನಾ (ಶಿಂಧೆ)ಗೆ ಸೇರ್ಪಡೆಗೊಂಡಿದ್ದರು.
ಸಂಪುಟ ಪುನಾರಚನೆಯ ಬಳಿಕ ಮಹಾರಾಷ್ಟ್ರದ ಪ್ರಮುಖ ಬಿಜೆಪಿ ನಾಯಕ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಹೆಚ್ಚುವರಿ ಹೊಣೆಗಳನ್ನು ಹಸ್ತಾಂತರಿಸುವ ಸಾಧ್ಯತೆಯೂ ಇದೆಯೆಂದು ವರದಿ ತಿಳಿಸಿದೆ.
ಮುಂಗಾರು ಅಧಿವೇಶನಕ್ಕೆ ಮೊದಲೇ ರೈಲ್ವೆ ಹಾಗೂ ವಿತ್ತ ಖಾತೆ ಸಚಿವರು ಬದಲಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ ಅತ್ಯಂತ ಪ್ರತಿಷ್ಠಿತ ಉಪ ಪ್ರಧಾನಿ ಹುದ್ದೆಯು ಅಮಿತ್ ಶಾ ಅವರಿಗೆ ದೊರೆಯುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಪ್ರಮುಖರೊಂದಿಗೆ ಮ್ಯಾರಥಾನ್ ಸಭೆಗಳನ್ನು ನಡೆಸುತ್ತಿದ್ದಾರೆಂದು ಎಂದು ಟಿವಿ9 ಮರಾಠಿ ವಾಹಿನಿಯ ವರದಿ ತಿಳಿಸಿದೆ.

