ಕಾಸರಗೋಡು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ನುಸುಳಿದ್ದ ದೇಶವಿರೋಧಿ ಶಕ್ತಿಗಳು ನಿರಾಶೆಗೊಂಡಿದ್ದು, ದೇಶಾದ್ಯಂತ ಗಲಭೆ ಸೃಷ್ಟಿಸುವ ಅವರ ಯತ್ನ ವಿಫಲವಾಗಿರುವುದಾಗಿ ಬಿಜೆಪಿ ರಾಜ್ಯ ಸೆಲ್ ಸಂಚಾಲಕ ವಿ.ಕೆ. ಸಜೀವನ್ ತಿಳಿಸಿದ್ದಾರೆ.
ಅವರು ಭಾರತವಿರೋಧಿ ಶಕ್ತಿಗಳೊಂದಿಗೆ ದೇಶವನ್ನು ಅಸ್ಥಿರಗೊಳಿಸುವ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ಯತ್ನವನ್ನು ಖಂಡಿಸಿ ಹಾಗೂ ನರೇಂದ್ರ ಮೋದಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಾಞಂಗಾಡಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಪ್ರತಿಭಟನೆಯನ್ನು ದೊಡ್ಡ ಮಟ್ಟದ ಸಂಘರ್ಷದತ್ತ ಕೊಂಡೊಯ್ಯುವ ದುರುದ್ದೇಶದಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡರು ಪ್ರಧಾನಮಂತ್ರಿಗಳ ನಿವಾಸವಿರುವ ಅತಿಸುರಕ್ಷಿತ ಪ್ರದೇಶದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದೇ ಕಾರಣಕ್ಕೆ ದೆಹಲಿ ಪೆÇಲೀಸರು ಹಾಗೂ ಅರೆಸೇನಾ ಪಡೆಗಳು ಬಲಪ್ರಯೋಗ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಹಾಗೂ ಆರ್ಥಿಕ ರಂಗದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಾಧಿಸಿದ ಪ್ರಗತಿಯಿಂದ ಅಸೂಯೆಗೊಂಡಿರುವ ಕೆಲವು ದೇಶವಿರೋಧಿ ಶಕ್ತಿಗಳು ದೇಶದಲ್ಲಿ ಆಂತರಿಕ ದಂಗೆಗೆ ಪ್ರಚೋದನೆ ನೀಡಿದೆ. ಇದಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಬಲ ನೀಡಿರುವುದು ಖಂಡನೀಯ. ಇಂತಹ ಯತ್ನಗಳಿಂದ ಕಾಂಗ್ರೆಸ್ ದೊಡ್ಡ ರಾಜಕೀಯ ಹಿನ್ನಡೆ ಅನುಭವಿಸಬೇಕಾಗಿ ಬರಲಿದೆ ಎಂದು ತಿಳಿಸಿದರು. ಇನ್ಸ್ಟಾಗ್ರಾಮ್ನಲ್ಲಿ ದೊಡ್ಡ ಮಟ್ಟದ ಪ್ರಭಾವವಿದೆ ಎಂದು ಬಿಂಬಿಸುತ್ತಿರುವ ಪ್ರತಿಪಕ್ಷಗಳ ಒಟ್ಟು ಫಾಲೋವರ್ಸ್ಗಳಿಗಿಂತ ಹೆಚ್ಚಿನ ವೀಕ್ಷಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮೆರಡು ವೀಡಿಯೊಗಳ ಮೂಲಕ ಗಳಿಸಿದ್ದಾರೆ.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಎ. ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್, ಜಿಲ್ಲಾ ಉಪಾಧ್ಯಕ್ಷರಾದ ಎಚ್.ಆರ್. ಸುಕನ್ಯಾ, ಎಂ. ಬಾಲ್ರಾಜ್, ರಾಜ್ಯ ಕೌನ್ಸಿಲ್ ಸದಸ್ಯರಾದ ಶಿವಕೃಷ್ಣ ಭಟ್, ಹರೀಶ್ ನಾರಂಪಾಡಿ, ಮಂಡಲ ಅಧ್ಯಕ್ಷರಾದ ಟಿ.ವಿ. ಶಿಬಿನ್, ಸಾಗರ್ ಚಾತ್ತಮತ್, ಪ್ರಶಾಂತ್, ಪ್ರದೀಪ್ ಎಂ., ದಿಲೀಪ್ ಪಳ್ಳಂಜಿ, ಗುರುಪ್ರಸಾದ್ ಪ್ರಭು, ಗೋಪಾಲಕೃಷ್ಣ ಎಂ., ವಿಕ್ರಮ್ ಪೈ ಉಪಸ್ಥಿತರಿದ್ದರು.



