ಕಾಸರಗೋಡು: ವೈದ್ಯಕೀಯ ಪ್ರತಿನಿಧಿಯ(ಮೆಡಿಕಲ್ ರೆಪ್) ಸಾವಿನ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ, ಭಾರತೀಯ ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘದ(ಬಿಎಂಎಸ್ಆರ್ಎ)ಕಾಸರಗೋಡು ಜಿಲ್ಲಾ ಸಮಿತಿನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಅಬಾಟ್ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ತಿರುವನಂತಪುರಂ ಮೂಲದ ಮಿಥುನ್ ಅವರ ಸಾವಿಗೆ ಸಂಬಂಧಿಸಿದ ಘಟನೆಯ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ನಡೆಸಲಾದ ಧರಣಿಯನ್ನು ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಪೇಂದ್ರನ್ ಕೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಿಥುನ್ ಸಾವಿಗೆ ಮುನ್ನ, ಕೆಲಸ ನಡೆಸುತ್ತಿದ್ದ ಕೇಂದ್ರದಲ್ಲಿನ ಅತಿಯಾದ ಮಾನಸಿಕ ಒತ್ತಡ ಮತ್ತು ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ವಿವಿಧ ಆರೋಪಗಳು ಕೇಳಿಬಂದಿದ್ದವು. ಈ ಘಟನೆಯ ನೈಜ ಕಾರಣಗಳನ್ನು ಪತ್ತೆಹಚ್ಚಲು ಹಾಗೂ ಕಾರ್ಮಿಕರ ಹಕ್ಕುಗಳು ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸಲು, ಸಂಬಂಧಿತ ಎಲ್ಲಾ ಅಂಶಗಳ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಬಿಎಂಎಸ್ಆರ್ಎ ಜಿಲ್ಲಾ ಅಧ್ಯಕ್ಷ ತೇಜಸ್ ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಿಥುನ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಹಾಗೂ ಘಟನೆಯ ಕುರಿತು ಪಾರದರ್ಶಕ ತನಿಖೆಯ ಮೂಲಕ ಹೊಣೆಗಾರಿಕೆಯನ್ನು ಖಚಿತಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಧರಣಿಗೆ ಪೂರ್ವಭಾವಿಯಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜತೆ ಕಾರ್ಯದರ್ಶಿಗಳಾದ ದಿನೇಶ್ ಪಿ, ಹರೀಶ್ ಸಿದ್ದಿಬೈಲ್ ಹಾಗೂ ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಾಲ ಉಪಸ್ಥಿತರಿದ್ದರು. ಬಿಎಂಎಸ್ಆರ್ಎ ರಾಜ್ಯ ಕಾರ್ಯದರ್ಶಿ ಮನೀಶ್ ಬಿ, ಜಿಲ್ಲಾ ಪದಾಧಿಕಾರಿಗಳಾದ ಅರುಣ್ ಬಿ, ರವಿಪ್ರಸಾದ್ ಎಸ್, ಭರತ್ ರಾಜ್, ಯೋಗೀಶ್ ಕೆ, ಅನಿಲ್ ಕುಮಾರ್, ವಿಖಿಲ್ ಭಾಸ್ ಮತ್ತು ನಿಖಿಲ್ ನಾರಾಯಣ್ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಬಿಎಂಎಸ್ಆರ್ಎ ಜಿಲ್ಲಾ ಕಾರ್ಯದರ್ಶಿ ಶರತ್ ಕುಮಾರ್ ಕೆ.ಎಸ್ ಸ್ವಾಗತಿಸಿದರು. ಬಿಎಂಎಸ್ಆರ್ಎ ಜಿಲ್ಲಾ ಅಧ್ಯಕ್ಷ ತೇಜಸ್ ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಶ್ರೀನಾಥ್ ಪೈಚಾಲ್ ವಂದಿಸಿದರು.



