ನವದೆಹಲಿ:ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪದ ಮೇಲೆ ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಾ ನಟ ಇಮ್ರಾನ್ ಖಾನ್ ಬುಧವಾರ ಮುಂಬೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದರು.
ಮಳೆಯಲ್ಲಿ ನೂರಾರು ವಿದ್ಯಾರ್ಥಿಗಳ ಜೊತೆಗೆ ನಟ ನಡೆದು ಸಾಗಿದ್ದಾರೆ. ತಮ್ಮನ್ನು ಗುರುತಿಸಿದ ಬೆಂಬಲಿಗರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಮೆರವಣಿಗೆಯ ವೀಡಿಯೋಗಳು ತೋರಿಸಿವೆ.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಕಷ್ಟಪಟ್ಟು ಓದುವ ಮತ್ತು ಅವರ ಶ್ರಮವನ್ನು ಅಮಾನ್ಯಗೊಳಿಸಿ ತಿರಸ್ಕರಿಸಿದವರ ವಿರುದ್ಧ ಪ್ರತಿಭಟಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಬೆಂಬಲ ವ್ಯಕ್ತಪಡಿಸಲು ನಾನು ಇಲ್ಲಿದ್ದೇನೆ. ಇದು ನಮ್ಮ ರಾಷ್ಟ್ರದ ಭವಿಷ್ಯಕ್ಕಾಗಿ ಹೋರಾಟವಾಗಿರುವುದರಿಂದ ಇಲ್ಲಿದ್ದೇನೆ. ಭಾರತ ಮಾತೆಯ ಎಲ್ಲಾ ಮಕ್ಕಳು ಇಂದು ಇಲ್ಲಿದ್ದಾರೆ" ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಮೇಲೆ ಪೊಲೀಸರ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್, "ಇಂದು ನನ್ನಲ್ಲಿ ಒಂದು ರೀತಿಯ ನೋವುಂಟಾಗಿದೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ದಾಳಿ ಮಾಡಿ ಥಳಿಸುವುದನ್ನು ಕಂಡು ನೋವಾಗಿದೆ. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ವ್ಯವಸ್ಥೆಯಿಂದ ವಿಫಲರಾದರು. ತಮ್ಮ ಮಾತು ಕೇಳುವಂತೆ ವಿನಂತಿಸಿದಾಗ ಅವರಿಗೆ ಮೌನವೇ ಉತ್ತರ ದೊರೆಯಿತು. ಎದ್ದುನಿಂತ ನಾಗರಿಕರಿಗೆ ಹೊಡೆಯಲಾಗಿದೆ ಆಡಳಿತ ಅವರನ್ನು ತಿಸ್ಕರಿಸಿದೆ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಮನಸು ಒಡೆದಿದೆ ಎಂದ ಆಲಿಯಾ
ಕಳೆದ ಕೆಲವು ದಿನಗಳಿಂದ ನನ್ನ ಮನಸು ಒಡೆದಿದೆ. ಆದರೆ ನಾನು ಭರಸೆಯಲ್ಲಿದ್ದೆ. ಪ್ರತಿಭಟಿಸುತ್ತಿರುವ ಪ್ರತಿ ವಿದ್ಯಾರ್ಥಿಗಳ ಹಿಂದೆ ಒಂದು ಕನಸಿದೆ. ಕುಟುಂಬದ ಭರವಸೆಯಿದೆ. ಅಸಂಖ್ಯಾತ ತ್ಯಾಗಗಳ ಪ್ರಯಾಣವಿದೆ. ಅವರ ನಂತರ ಬರುವವರಿಗೆ ಉತ್ತಮ ಮಾರ್ಗವನ್ನು ಸೃಷ್ಟಿಸುತ್ತಿದ್ದಾರೆ. ಅವರ ದೃಢನಿಶ್ಚಯವು ನಮ್ಮೆಲ್ಲರ ಮುಂದೆ ಹಿಡಿದಿರುವ ಕನ್ನಡಿಯಾಗಿದೆ." ಎಂದು ಆಲಿಯಾ ಭಟ್ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ನಟಿ ಹುಮಾ ಖುರೇಷಿ ಬೆಂಬಲ
ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ನಟಿ ಹುಮಾ ಖುರೇಷಿ ಮತ್ತು ಸಾಕಿಬ್ ಸಲೀಂ ತಡರಾತ್ರಿ ಜಂತರ್ ಮಂತರ್ಗೆ ಭೇಟಿ ನೀಡಿದ್ದಾರೆ. ಆನ್ಲೈನ್ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೋಗಳು ಮತ್ತು ಫೋಟೋಗಳು ಹುಮಾ ಅಸವರು ವಿದ್ಯಾರ್ಥಿಗಳ ಜೊತೆಗೆ ಸ್ಥಳದಲ್ಲಿರುವುದನ್ನು ತೋರಿಸಿವೆ. ಅವು ಈಗ ವೈರಲ್ ಆಗಿವೆ. ಕಪ್ಪು ಟೀಶರ್ಟ್ ಮತ್ತು ಜೀನ್ಸ್ ಧರಿಸಿದ್ದರೆ, ಸಾಕಿಬ್ ಬಿಳಿ ಟೀ ಶರಟ್ ಮತ್ತು ಬೂದು ಬಣ್ಣದ ಜೀನ್ಸ್ ಧರಿಸಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಆಯೇಷಾ ಖಾನ್
'ಧುರಂಧರ್' ಸಿನಿಮಾದಲ್ಲಿ ನಟಿಸಿರುವ ಆಯೇಷಾ ಖಾನ್ ಈ ಹಿಂದೆ 'ಜಂತರ್ ಮಂತರ್' ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ್ದರು. ಜುಲೈ 22ರಂದು ಮುಂಬೈ ಪೊಲೀಸರು ತಮ್ಮನ್ನು ರಸ್ತೆಯಲ್ಲಿ ನಿಂತಿದ್ದಕ್ಕಾಗಿ ಬಂಧಿಸಿರುವುದಾಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ನನ್ನ ಕೈಗಳು ಈಗಲೂ ನಡುಗುತ್ತಿವೆ. ಶಾಂತಿಯುತವಾಗಿ ರಸ್ತೆಯಲ್ಲಿ ನಿಂತಿದ್ದಕ್ಕಾಗಿ ನನ್ನನ್ನು ಪೊಲೀಸ್ ವ್ಯಾನ್ನಲ್ಲಿ ಬಂಧಿಸಲಾಗಿದೆ. ನಾನು ಪ್ರತಿಭಟನೆ ಪ್ರಾರಂಭಿಸಿರಲೂ ಇಲ್ಲ. ನನ್ನ ಸಹೋದರ ಮತ್ತು ಪುರುಷ ಸ್ನೇಹಿತರನ್ನು ಬಂಧಿಸಿದ್ದಕ್ಕಾಗಿ ಅಲ್ಲಿ ನಾನು ನಿಂತಿದ್ದೆ" ಎಂದು ಅವರು ಹೇಳಿದರು.
"ರಸ್ತೆಯಲ್ಲಿ ನಿಲ್ಲುವುದೂ ಅಪರಾಧವೆ? ನನ್ನನ್ನು ಬಂಧಿಸಿರುವುದು ಏಕೆ ಎಂದು ಇನ್ನೂ ಪೊಲೀಸರು ತಿಳಿಸಿಲ್ಲ" ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಲಿವುಡ್ ತಾರೆಯರಾದ ಜೀನತ್ ಅಮಾನ್, ಅನುರಾಗ್ ಕಶ್ಯಪ್, ಶಬಾನಾ ಅಜ್ಮಿ, ರತ್ನ ಪಾಠಕ್, ಅಭಯ್ ಡಿಯೋಲ್, ಪ್ರಕಾಶ್ ರೈ ಮತ್ತು ಈಮಿ ವೈದ್ಯ ಸೇರಿದಂತೆ ಅನೇಕ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್, ಆಲಿಯಾ ಭಟ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಟೀಕಿಸಿದ್ದಾರೆ.

