ಅಹಮದಾಬಾದ್: ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್ ನಲ್ಲಿ ಈಗಲೂ 2026ರ ಜನಸಂಖ್ಯೆಯ ಅಂದಾಜಿನ ಪ್ರಕಾರ ಸುಮಾರು ಅರ್ಧದಷ್ಟು ಮಂದಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಓಈSಂ) ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಅವಲಂಬಿಸಿರುವುದು ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಲಾದ ದತ್ತಾಂಶಗಳಿಂದ ಬಹಿರಂಗವಾಗಿದೆ.
ರಾಜ್ಯದ ಅಭಿವೃದ್ಧಿಯ ಪ್ರತಿಪಾದನೆ ಮತ್ತು ತಳಮಟ್ಟದ ಆರ್ಥಿಕ ವಾಸ್ತವ್ಯದ ನಡುವಿನ ವ್ಯತ್ಯಾಸವನ್ನು ಈ ಅಂಕಿ-ಅಂಶಗಳು ಎತ್ತಿ ತೋರಿಸಿವೆ.
ಸಂಸತ್ತಿನಲ್ಲಿ ಮಂಡನೆಯಾದ ದತ್ತಾಂಶಗಳ ಪ್ರಕಾರ, ಗುಜರಾತ್ ನಲ್ಲಿ 3,38,42,935 ಮಂದಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಈ ಅಂಕಿ-ಅಂಶಗಳು, ಗುಜರಾತ್ ಅನ್ನು ದೇಶದ ಅಭಿವೃದ್ಧಿಯ ಎಂಜಿನ್ ಎಂದು ಬಿಂಬಿಸುವ ಪ್ರತಿಪಾದನೆ ಕುರಿತು ಚರ್ಚೆಗೆ ಕಾರಣವಾಗಿವೆ.
ಗುಜರಾತ್ ನ 2026ರ ಅನಧಿಕೃತ ಜನಸಂಖ್ಯೆಯ ಅಂದಾಜು 7.43 ಕೋಟಿಯಾಗಿದೆ. ಇದರ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 45.55ರಷ್ಟು ಮಂದಿ, ಅಂದರೆ ಪ್ರತಿ ಇಬ್ಬರಲ್ಲಿ ಒಬ್ಬರು, ರಿಯಾಯಿತಿ ದರದ ಆಹಾರ ಧಾನ್ಯಕ್ಕಾಗಿ ಸರ್ಕಾರದ ಯೋಜನೆಗಳನ್ನು ಅವಲಂಬಿಸಿದ್ದಾರೆ.
ದೇಶದಲ್ಲಿ ಕೈಗಾರಿಕಾಭಿವೃದ್ಧಿ, ನಗರೀಕರಣ ಹಾಗೂ ಆರ್ಥಿಕ ಸಮೃದ್ಧಿಯ ಮಾದರಿ ಎಂದು ಬಿಂಬಿಸಲಾಗುವ ಗುಜರಾತ್ ಕುರಿತು ಈ ದತ್ತಾಂಶಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮೂಲಭೂತ ಜೀವನಕ್ಕಾಗಿ ರಾಜ್ಯದ ದೊಡ್ಡ ಪ್ರಮಾಣದ ಜನಸಂಖ್ಯೆ ಈಗಲೂ ಆಹಾರ ಭದ್ರತಾ ಯೋಜನೆಗಳ ನೆರವನ್ನೇ ಅವಲಂಬಿಸಿರುವ ಸಂದರ್ಭದಲ್ಲಿ, ಗುಜರಾತ್ ತನ್ನನ್ನು ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಹೇಗೆ ಕರೆದುಕೊಳ್ಳಬಹುದು ಎಂಬ ಪ್ರಶ್ನೆಯನ್ನು ಸಮಾಜಶಾಸ್ತ್ರಜ್ಞರು ಮುಂದಿಟ್ಟಿದ್ದಾರೆ.
2026ರ ಜನಸಂಖ್ಯೆಯ ಮುನ್ನೋಟ 7.43 ಕೋಟಿಯಾಗಿದ್ದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆಯುತ್ತಿರುವವರ ಸಂಖ್ಯೆ 3,38,42,935 ಆಗಿದೆ. ಅಂದರೆ, ರಾಜ್ಯದ ಶೇ. 45.55ರಷ್ಟು ಜನರು ಈ ಯೋಜನೆಗಳ ವ್ಯಾಪ್ತಿಯಲ್ಲಿದ್ದು, ಉಳಿದ 4.05 ಕೋಟಿ ಮಂದಿ ಯೋಜನೆಗಳ ವ್ಯಾಪ್ತಿಯಿಂದ ಹೊರಗಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಒಟ್ಟು ಫಲಾನುಭವಿಗಳ ಪೈಕಿ ಗುಜರಾತ್ ನ ಪಾಲು ಶೇ. 4.28ರಷ್ಟಿದೆ. ಗುಜರಾತ್ ನ 3.38 ಕೋಟಿ ಮಂದಿ ಕೇವಲ ಕಲ್ಯಾಣ ಯೋಜನೆಗಳ ಫಲಾನುಭವಿಗಳಷ್ಟೇ ಅಲ್ಲ, ರಾಜ್ಯದಲ್ಲಿನ ಆರ್ಥಿಕ ದುರ್ಬಲತೆಯ ಪ್ರತಿಬಿಂಬವೂ ಹೌದು ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಒಟ್ಟು ಜಿಡಿಪಿಗೆ ಗಣನೀಯ ಕೊಡುಗೆ ನೀಡುವ ರಾಜ್ಯಗಳಲ್ಲಿ ಗುಜರಾತ್ ಒಂದಾಗಿದ್ದರೂ, ರಾಜ್ಯದ ಗಮನಾರ್ಹ ಪ್ರಮಾಣದ ಜನರು ತಮ್ಮ ಜೀವನೋಪಾಯಕ್ಕಾಗಿ ಈಗಲೂ ರಿಯಾಯಿತಿ ದರದ ಆಹಾರ ಧಾನ್ಯಗಳನ್ನು ಅವಲಂಬಿಸಬೇಕಾಗಿರುವುದು ದತ್ತಾಂಶಗಳಿಂದ ಸ್ಪಷ್ಟವಾಗಿದೆ.
ಕೈಗಾರಿಕಾ ಕಾರಿಡಾರ್, ವಿಶ್ವದರ್ಜೆಯ ಮೂಲಸೌಕರ್ಯ, ಹೂಡಿಕೆ ಶೃಂಗಸಭೆಗಳ ಆತಿಥ್ಯ ಹಾಗೂ ಕ್ಷಿಪ್ರ ನಗರೀಕರಣದ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿರುವ ಗುಜರಾತ್ ನ ಅಭಿವೃದ್ಧಿ ಮಾದರಿ ಈ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ಸಂಬಂಧಿಸಿದ ದತ್ತಾಂಶಗಳು ಗುಜರಾತ್ ನ ಅಭಿವೃದ್ಧಿಯ ಮತ್ತೊಂದು ಮುಖವನ್ನು ತೆರೆದಿಟ್ಟಿವೆ. ರಾಜ್ಯದ ಆರ್ಥಿಕ ಬೆಳವಣಿಗೆ ಸಾರ್ವತ್ರಿಕ ಆಹಾರ ಭದ್ರತೆ ಅಥವಾ ಸಮಾನ ಸಮೃದ್ಧಿಯಾಗಿ ರೂಪಾಂತರಗೊಂಡಿಲ್ಲ ಎಂಬುದನ್ನು ಈ ಅಂಕಿ-ಅಂಶಗಳು ಸೂಚಿಸುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಡಾ. ಹಿರೇನ್ ಬಂಕೇರ್, "ಗುಜರಾತ್ ನ ಅರ್ಧದಷ್ಟು ಜನಸಂಖ್ಯೆ ರಿಯಾಯಿತಿ ದರದ ಆಹಾರ ಧಾನ್ಯ ಯೋಜನೆಗಳ ಫಲಾನುಭವಿಗಳಾಗಿರುವುದು ವಾಸ್ತವ. ಇದು ರಾಜ್ಯದ ಜನರ ಬಹುಪಾಲು ಈಗಲೂ ಕಡಿಮೆ ಆದಾಯ, ನಿರುದ್ಯೋಗ, ಅಸಂಘಟಿತ ಕಾರ್ಮಿಕ ಪರಿಸ್ಥಿತಿ ಹಾಗೂ ಆರ್ಥಿಕ ಅಸ್ಥಿರತೆಯೊಂದಿಗೆ ಹೋರಾಡುತ್ತಿರುವುದನ್ನು ಸೂಚಿಸುತ್ತದೆ" ಎಂದು ಹೇಳಿದ್ದಾರೆ.

