ನವದೆಹಲಿ: "INDIA ಮೈತ್ರಿಕೂಟದ ಸಂಸದರು ಮತ್ತು ನಾಯಕರು ತೀಸ್ ಜನವರಿ ಮಾರ್ಗದಲ್ಲಿರುವ ಗಾಂಧಿ ಸ್ಮೃತಿಗೆ ಶಾಂತಿಯುತವಾಗಿ ತೆರಳುತ್ತಿದ್ದಾರೆ. NEET ಪ್ರಶ್ನೆಪತ್ರಿಕೆ ಸೋರಿಕೆಯ ಬಳಿಕ ತಮ್ಮ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳನ್ನು ನಾವು ಸ್ಮರಿಸುತ್ತೇವೆ.
ನ್ಯಾಯ ಮತ್ತು ಹೊಣೆಗಾರಿಕೆಗೆ ಶಾಂತಿಯುತವಾಗಿ ಆಗ್ರಹಿಸಿದ್ದಕ್ಕಾಗಿ ಗಾಯಗೊಂಡ ವಿದ್ಯಾರ್ಥಿಗಳೊಂದಿಗೆ ನಾವು ನಿಲ್ಲುತ್ತೇವೆ. ಭಾರತದ ವಿದ್ಯಾರ್ಥಿಗಳು ಒಬ್ಬಂಟಿಯಲ್ಲ. ಇಡೀ ವಿರೋಧ ಪಕ್ಷವು ಅವರೊಂದಿಗೆ ಹಾಗೂ ಅವರ ಬೇಡಿಕೆಗಳೊಂದಿಗೆ ನಿಂತಿದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ಇತ್ತೀಚಿನ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ಗಾಯಗೊಂಡ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ತೀಸ್ ಜನವರಿ ಮಾರ್ಗದಲ್ಲಿರುವ ಗಾಂಧಿ ಸ್ಮೃತಿಗೆ ಭೇಟಿ ನೀಡಿದರು. ಈ ವೇಳೆ ಮಧ್ಯ ದಿಲ್ಲಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹಲವು ಕಡೆ ಬ್ಯಾರಿಕೇಡ್ಗಳನ್ನು ಹಾಕಿ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಿ. ಚಿದಂಬರಂ, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಪ್ರಮೋದ್ ತಿವಾರಿ, ರೇಣುಕಾ ಚೌಧರಿ ಸೇರಿದಂತೆ ಕಾಂಗ್ರೆಸ್ನ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ಓಅP (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ, ಆರ್ಜೆಡಿಯ ಮಿಸಾ ಭಾರ್ತಿ, ತೃಣಮೂಲ ಕಾಂಗ್ರೆಸ್ ನ ಮಹುವಾ ಮೊಯಿತ್ರಾ ಹಾಗೂ ಕಲ್ಯಾಣ್ ಬ್ಯಾನರ್ಜಿ, ಸಿಪಿಐನ ಪಿ. ಸಂದೋಷ್ ಕುಮಾರ್ ಮತ್ತು ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಸೇರಿದಂತೆ INDIA ಮೈತ್ರಿಕೂಟದ ಇತರ ಪಕ್ಷಗಳ ನಾಯಕರು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರಾಹುಲ್ ಗಾಂಧಿ ಅವರ ನಿವಾಸದ ಹೊರಗೆ ಪೊಲೀಸರು ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರಿಂದ ಅವರನ್ನು "ಗೃಹಬಂಧನದಂತಹ ಪರಿಸ್ಥಿತಿಯಲ್ಲಿ" ಇರಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ ಎಂದು ANI ವರದಿ ಮಾಡಿದೆ.
ವಿರೋಧ ಪಕ್ಷದ ಸಂಸದರು ಮೊದಲು ಸುನೇಹ್ರಿ ಬಾಗ್ ರಸ್ತೆಯಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಜಮಾಯಿಸಿದರು. ಈ ವೇಳೆ ಅಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಾಂಗ್ರೆಸ್ ಮತ್ತು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ತೀಸ್ ಜನವರಿ ಮಾರ್ಗದತ್ತ ತೆರಳುವುದನ್ನು ತಡೆಯಲು ಆರಂಭದಲ್ಲಿ ಪೊಲೀಸರು ಸುನೇಹ್ರಿ ಬಾಗ್ ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರು. ಬಳಿಕ ಅವುಗಳನ್ನು ತೆರವುಗೊಳಿಸಿ ರಾಹುಲ್ ಗಾಂಧಿ ಹಾಗೂ ಸಂಸದರಿಗೆ ಮುಂದೆ ಸಾಗಲು ಅವಕಾಶ ನೀಡಲಾಯಿತು.
ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಸಮೀಪ ಮತ್ತೊಮ್ಮೆ ನಾಯಕರನ್ನು ಪೊಲೀಸರು ತಡೆದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 163ರ ಅಡಿಯಲ್ಲಿ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲೇಖಿಸಿದ ಪೊಲೀಸರು, ಆ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಸೇರುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ನಂತರ ನಾಯಕರಿಗೆ ಗಾಂಧಿ ಸ್ಮೃತಿಯತ್ತ ತೆರಳಲು ಅನುಮತಿ ನೀಡಲಾಯಿತು.
ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ, ಸಂಸದರನ್ನು 25 ನಿಮಿಷಗಳಿಗೂ ಹೆಚ್ಚು ಕಾಲ ಬಸ್ ನಲ್ಲೇ ಕಾಯಿಸಲಾಯಿತು ಎಂದು ಆರೋಪಿಸಿದ್ದಾರೆ.
"ನಾವು 25 ನಿಮಿಷಗಳಿಗೂ ಹೆಚ್ಚು ಕಾಲ ಬಸ್ನಲ್ಲಿ ಕುಳಿತಿದ್ದೇವೆ. ಮಧ್ಯ ದಿಲ್ಲಿಯ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ದಿಲ್ಲಿಯ ರಸ್ತೆಗಳನ್ನು 'ಭದ್ರಪಡಿಸಲು' ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ಕಾರ ಯಾವುದಕ್ಕೆ ಹೆದರುತ್ತಿದೆ? ಈ ಭೀತಿ ಏಕೆ?" ಎಂದು ಅವರು ಪ್ರಶ್ನಿಸಿದ್ದಾರೆ.

