ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ನಾಯಕರು ನಡೆಸಿದ ಪ್ರತಿಭಟನೆಯನ್ನು ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಟೀಕಿಸಿದ್ದಾರೆ. ಪ್ರಧಾನಿ ನಿವಾಸದ ಬದಲು ನಾಯಕರು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆ ಸೇರಿಕೊಳ್ಳಬೇಕಿತ್ತು ಎಂದು ಹೇಳಿದ ಅವರು, ಚಳವಳಿಯು ರಾಜಕೀಯೇತರವಾದುದು ಎಂದು ಸ್ಪಷ್ಟಪಡಿಸಿದ್ದಾರೆ.
India Today ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರೊಂದಿಗಿನ ಸಂದರ್ಶನದಲ್ಲಿ ಗೀತಾಂಜಲಿ ಆಂಗ್ಮೊ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
"ಜುಲೈ 21 ರಂದು ಕಾಂಗ್ರೆಸ್ ವಿಪಕ್ಷಗಳ ಜೊತೆಗೂಡಿ ನಡೆಸಿದ ಪ್ರತಿಭಟನೆಯು ಅಪ್ರಾಮಾಣಿಕವಾಗಿತ್ತು. ಅವರು ಪ್ರಧಾನಿ ನಿವಾಸದ ಬದಲು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆ ಸೇರಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು" ಎಂದು ಆಂಗ್ಮೊ ತಿಳಿಸಿದರು.
"ರಾಜಕಾರಣಿಗಳು ಈಗ ವಾಂಗ್ಚುಕ್ ಮತ್ತು ಅವರ ಪ್ರತಿಷ್ಠೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಸಾರ್ವಜನಿಕರನ್ನು ಇನ್ನು ಮುಂದೆ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು
"ನಮಗೆ ಯಾವುದೇ ವಿಪಕ್ಷವಿಲ್ಲ. ಯಾವುದೇ ಸರ್ಕಾರವೂ ಇಲ್ಲ. ನಮಗೆ ಸಂಸತ್ತೇ ಅತ್ಯುನ್ನತ ಸಂಸ್ಥೆ. ಸಂಸತ್ತು ಶಿಕ್ಷಣವನ್ನು ಅತ್ಯಂತ ಮೂಲಭೂತ ವಿಷಯವಾಗಿ ನೋಡಬೇಕೆಂದು ನಾವು ಬಯಸುತ್ತೇವೆ " ಎಂದು ಶಿಕ್ಷಣತಜ್ಞೆಯೂ ಆಗಿರುವ ಆಂಗ್ಮೊ ತಿಳಿಸಿದರು.
ಈ ಚಳವಳಿಯು ಯಾವುದೇ ರಾಜಕೀಯ ಪಕ್ಷ ಅಥವಾ ವಿಪಕ್ಷಗಳ ಬೆಂಬಲವಿಲ್ಲದೆ, ಸಂಪೂರ್ಣವಾಗಿ ಸ್ವಾಭಾವಿಕವಾಗಿ ರೂಪುಗೊಂಡಿದೆ ಎಂದು ಅವರು ಪ್ರತಿಪಾದಿಸಿದರು .
ವಿದ್ಯಾರ್ಥಿಗಳು ಸಂಸತ್ತಿಗೆ ಹಮ್ಮಿಕೊಂಡಿದ್ದ ಮೆರವಣಿಗೆಯ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ಖಂಡಿಸಿ, ಪ್ರಧಾನಿ ಮೋದಿಯವರ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದ ಬಳಿ ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ ಎರಡು ದಿನಗಳ ಬಳಿಕ ಗೀತಾಂಜಲಿ ಆಂಗ್ಮೊ ಈ ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಪ್ರತಿಭಟನೆಗೆ ಬರುವವರನ್ನು ಸ್ವಾಗತಿಸಲಾಗುವುದು ಎಂದು ಹೇಳಿದ ಆಂಗ್ಮೊ , "ಯಾರು ತಮ್ಮ ಸ್ವಂತ ಲಾಭ ಅಥವಾ ಉದ್ದೇಶಗಳನ್ನು ಇಟ್ಟುಕೊಂಡು ಬರುತ್ತಾರೋ ಅವರು ತನ್ನಷ್ಟಕ್ಕೆ ಹೊರಬೀಳುತ್ತಾರೆ. ಏಕೆಂದರೆ ಈ ಚಳವಳಿಯು ಸಂಪೂರ್ಣ ಪ್ರಾಮಾಣಿಕತೆ ಮತ್ತು ಪಾವಿತ್ರ್ಯತೆಯಿಂದ ರೂಪುಗೊಂಡಿದೆ" ಎಂದು ಹೇಳಿದರು.
ಜುಲೈ 18 ರಂದು ಸೋನಮ್ ವಾಂಗ್ಚುಕ್ ಅವರನ್ನು ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದಂದಿನಿಂದ ಆಂಗ್ಮೊ ಅವರು ನಿರಂತರವಾಗಿ ಅವರ ಜೊತೆಗಿದ್ದಾರೆ. ಆರಂಭದಲ್ಲಿ ವಾಂಗ್ಚುಕ್ ರನ್ನು ಸರ್ಕಾರಿ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಆಂಗ್ಮೊ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ದಿಲ್ಲಿ ಹೈಕೋರ್ಟ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿತ್ತು.
ಆಸ್ಪತ್ರೆಯಿಂದಲೇ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿರುವ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹವು 26 ನೇ ದಿನಕ್ಕೆ ಕಾಲಿಟ್ಟಿದೆ.

