ಮುಂಬೈ: ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗೆ ಬಂದರೆ ಸುಳ್ಳು ಮಾದಕವಸ್ತು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿರುವ ವೈರಲ್ ವೀಡಿಯೊದಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ, ಮುಂಬೈ ಪೊಲೀಸರು ಗುರುವಾರ ತನಿಖೆಗೆ ಆದೇಶಿಸಿದ್ದು, ಸಂಬಂಧಪಟ್ಟ ಪೊಲೀಸ್ ಚಾಲಕನನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ.
ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಖಾಕಿಯಲ್ಲಿ ಗೂಂಡಾಗಿರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪೊಲೀಸ್ ಚಾಲಕನ ನಡೆ ಸಂಪೂರ್ಣವಾಗಿ ತಪ್ಪು ಎಂದು ಖಂಡಿಸಿದ್ದಾರೆ. ಸಂಬಂಧಪಟ್ಟ ಚಾಲಕನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ 25 ಸೆಕೆಂಡುಗಳ ವೀಡಿಯೊದಲ್ಲಿ, ಪೊಲೀಸ್ ಚಾಲಕನೊಬ್ಬ ಬಂಧಿತ ಇಬ್ಬರು ವಿದ್ಯಾರ್ಥಿಗಳಿಗೆ, ಮುಂದಿನ ಪ್ರತಿಭಟನೆಗಳಲ್ಲಿ ಭಾಗವಹಿಸಿದರೆ ಸುಳ್ಳು ಮಾದಕವಸ್ತು ಪ್ರಕರಣಗಳಲ್ಲಿ ಸಿಲುಕಿಸಲಾಗುವುದು ಎಂದು ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ.
"ನಾನು ನಿಮ್ಮನ್ನು ಇಲ್ಲಿ ಮತ್ತೆ ನೋಡಿದರೆ, ನಿಮ್ಮ ಜೇಬಿನಲ್ಲಿ 50 ಗ್ರಾಂ 'ಪೌಡರ್' ಹಾಕುತ್ತೇನೆ. ನಿಮಗೆ ಜಾಮೀನು ಸಿಗುವುದಿಲ್ಲ. ನಿಮ್ಮ ಇಡೀ ಜೀವನ ಹಾಳಾಗುತ್ತದೆ. ನಿಮ್ಮ ಕಾರಣದಿಂದಾಗಿ ನಾವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ" ಎಂದು ಚಾಲಕ ವಿದ್ಯಾರ್ಥಿಗಳಿಗೆ ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.
ವೈರಲ್ ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
"ಸತ್ಯಾಂಶಗಳನ್ನು ಪರಿಶೀಲಿಸಿದ ಬಳಿಕ, ವಿಚಾರಣೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಚಾಲಕನನ್ನು ಅವರ ಪ್ರಸ್ತುತ ಕರ್ತವ್ಯದಿಂದ ಬಿಡುಗಡೆಮಾಡಲಾಗಿದೆ" ಎಂದು ಅವರು ಹೇಳಿದ್ದಾರೆ.
ಈ ಘಟನೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಪೊಲೀಸ್ ಪಡೆಯ ವರ್ತನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
"ಇದು ನಿಜವಾಗಿದ್ದರೆ, ಇದು ವಿದ್ಯಾರ್ಥಿಗಳನ್ನು ಬೆದರಿಸುವ ಪ್ರಯತ್ನ ಮಾತ್ರವಲ್ಲ, ಪ್ರಜಾಪ್ರಭುತ್ವದ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ. ಧ್ವನಿ ಎತ್ತುವುದು ಅಪರಾಧವಲ್ಲ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಬೆದರಿಕೆಗಳಿಂದಲ್ಲ, ಹೊಣೆಗಾರಿಕೆಯಿಂದ ಉತ್ತರಿಸಬೇಕು" ಎಂದು ಮುಂಬೈ ಕಾಂಗ್ರೆಸ್ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಹೇಳಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ಈ ಬೆದರಿಕೆಗಳನ್ನು "ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆ" ಎಂದು ಹೇಳಿದ್ದು, ಯುವ ಧ್ವನಿಗಳನ್ನು ಮೌನಗೊಳಿಸಲು ಇಂತಹ ತಂತ್ರಗಳನ್ನು ಬಳಸುವುದು ತೀವ್ರ ದಬ್ಬಾಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್, ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಿಭಟನಾ ನಿರತ ಯುವಕರನ್ನು ಬೆದರಿಸಲು ಪೊಲೀಸ್ ಪಡೆಯನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರ ವರ್ತನೆಯನ್ನು "ಖಾಕಿಯಲ್ಲಿ ಗೂಂಡಾಗಿರಿ" ಹಾಗೂ "ಬ್ರಿಟಿಷ್ ಆಳ್ವಿಕೆಗಿಂತಲೂ ಕೆಟ್ಟದು" ಎಂದ ಅವರು, ಬೆದರಿಕೆಯಲ್ಲಿ ಉಲ್ಲೇಖಿಸಲಾದ ಮಾದಕವಸ್ತುಗಳನ್ನು ಪೊಲೀಸರು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇಂತಹ ಕ್ರಮಗಳು ಸಜ್ಜನರನ್ನು ರಕ್ಷಿಸುವ ಮತ್ತು ದುಷ್ಟರನ್ನು ಶಿಕ್ಷಿಸುವ ಪೊಲೀಸ್ ಪಡೆಯ ಮೂಲ ಧ್ಯೇಯವನ್ನೇ ದುರ್ಬಲಗೊಳಿಸುತ್ತವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಅWಅ) ಸದಸ್ಯೆ ಹಾಗೂ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಪೊಲೀಸ್ ಪಡೆ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
"ಆದರೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಅವರು ಸ್ವಲ್ಪವೂ ಹೆದರಿಲ್ಲ ಎಂಬುದನ್ನು ತೋರಿಸುತ್ತದೆ. ಚೆನ್ನಾಗಿ ಮಾಡಿದ್ದೀರಿ, ಉeಟಿ Z. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ!" ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಫಡ್ನವೀಸ್, "ಪೊಲೀಸ್ ಚಾಲಕನ ನಡೆ ಸಂಪೂರ್ಣವಾಗಿ ತಪ್ಪು. ನಾವು ಅದನ್ನು ಖಂಡಿಸುತ್ತೇವೆ. ಸಂಬಂಧಪಟ್ಟ ಚಾಲಕನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಆಂದೋಲನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊಗಳೂ ಕಂಡುಬಂದಿವೆ. ಕೆಲವರು ಕಲ್ಲು ತೂರಾಟ ನಡೆಸಿ ಪೊಲೀಸರ ಮೇಲೆ ದಾಳಿ ಮಾಡುತ್ತಿದ್ದರು. ಅವರು ವಿದ್ಯಾರ್ಥಿಗಳ ಬೇಡಿಕೆಗಳಿಗಾಗಿ ಹೋರಾಡಲು ಬಂದವರಲ್ಲ. ಪ್ರತಿಭಟನೆಯ ಲಾಭ ಪಡೆದು ಅರಾಜಕತೆ ಸೃಷ್ಟಿಸಲು ಬಂದವರು. ಸಂಘಟಕರು ಅಂತಹ ಅಂಶಗಳನ್ನು ದೂರವಿಡಬೇಕು" ಎಂದು ಫಡ್ನವೀಸ್ ಉಲ್ಲೇಖಿಸಿದರು.

