ಲಖಿಂಪುರ್ ಖೇರಿ : ಜಿಲ್ಲಾಡಳಿತವು ಇಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಆಲಿಕೆ ಸಭೆಯು,13ರ ಹರೆಯದ ಬಾಲಕನೋರ್ವ ತನ್ನ ಕುಟುಂಬದ ಆಸ್ತಿ ವಿವಾದದ ಬಗ್ಗೆ ತಕ್ಷಣದ ಕ್ರಮಕ್ಕೆ ಒತ್ತಾಯಿಸಿ ಮತ್ತು ಆಡಳಿತದ ವಿಳಂಬ ಧೋರಣೆಯನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ಅಂಜನಿ ಕುಮಾರ್ ಸಿಂಗ್ ಅವರಿಗೆ ದಿಟ್ಟ ಸವಾಲು ಹಾಕಿದಾಗ ಒಂದು ರೋಚಕ ಮುಖಾಮುಖಿಗೆ ಸಾಕ್ಷಿಯಾಗಿದೆ.
'ಸಂಪೂರ್ಣ ಸಮಾಧಾನ ದಿವಸ್' ಕಾರ್ಯಕ್ರಮಕ್ಕೆ ಒಬ್ಬನೇ ಬಂದಿದ್ದ 8ನೇ ತರಗತಿಯ ವಿದ್ಯಾರ್ಥಿ ಅಮಿತಾಭ್ ಗುಪ್ತಾ, ತಮ್ಮ ಜಂಟಿ ಒಡೆತನದ ಮನೆಯ ಒಂದು ಭಾಗಕ್ಕೆ ಸಂಬಂಧಿಕರು ಹಾಕಿರುವ ಬೀಗವನ್ನು ತೆರವುಗೊಳಿಸಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಿದ್ದ.
ಒಬ್ಬನೇ ಬಂದಿದ್ದೀಯಾ ಎಂದು ಜಿಲ್ಲಾಧಿಕಾರಿಗಳು ಕೇಳಿದಾಗ ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದ ಬಾಲಕ, ತನ್ನ ತಂದೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಾಯಿ ಕುಟುಂಬ ನಿರ್ವಹಣೆಗಾಗಿ ಇತರರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಪದೇ ಪದೇ ದೂರು ನೀಡಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ವಿವರಿಸಿದ. ಮನೆಯ ಬೀಗ ಹಾಕಿರುವ ಭಾಗವನ್ನು ಬಾಡಿಗೆಗೆ ನೀಡಿದರೆ ಅದರಿಂದ ಬರುವ ಹಣ ತನ್ನ ಮತ್ತು ತನ್ನ ಸಹೋದರಿಯ ಶಿಕ್ಷಣಕ್ಕೆ ನೆರವಾಗುತ್ತದೆೆ ಎಂದು ಆತ ಹೇಳಿದ.
ಅಧಿಕಾರಿಗಳು ಕೇವಲ ಭರವಸೆ ನೀಡಬಾರದು, ತಕ್ಷಣವೇ ಬೀಗವನ್ನು ತೆರವುಗೊಳಿಸಬೇಕು ಎಂದು ಹುಡುಗ ಪದೇಪದೇ ಮಧ್ಯಪ್ರವೇಶಿಸಿ ಒತ್ತಾಯಿಸಿದಾಗ ವಾಗ್ವಾದ ಕಾವು ಪಡೆದುಕೊಂಡಿತ್ತು.
ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಓರ್ವರು ಭರವಸೆ ನೀಡಿದಾಗ, ಅಮಿತಾಭ್, ಮಾಡುವುದಾಗಿ ಹೇಳಬೇಡಿ, ಬೇಗ ಮಾಡಿ ಎಂದು ಪ್ರತಿಕ್ರಿಯಿಸಿದ.
ಜಿಲ್ಲಾಧಿಕಾರಿಗಳು ತನ್ನ ಓದಿನ ಕಡೆ ಗಮನಹರಿಸುವಂತೆ ಸಲಹೆ ನೀಡಿದಾಗ ಅಮಿತಾಭ್, ಶಿಕ್ಷಣಕ್ಕೆ ಹಣದ ಅಗತ್ಯವಿದೆ ಮತ್ತು ತನ್ನ ತಾಯಿ ತಿಂಗಳಿಗೆ ಕೇವಲ 3,000 ರೂ.ಗಳಿಸುವಾಗ ತನ್ನ ಕುಟುಂಬ ಪುಸ್ತಕಗಳು ಮತ್ತು ಇತರ ವೆಚ್ಚಗಳನ್ನು ಹೇಗೆ ಭರಿಸಲು ಸಾಧ್ಯ ಎಂದು ಪ್ರಶ್ನಿಸಿದ. ಅಲ್ಲದೆ, ಈ ಹಿಂದೆ ಸಲ್ಲಿಸಿದ ದೂರುಗಳನ್ನು ಯಾರೂ ಆಲಿಸಿಲ್ಲ ಎಂದು ಆರೋಪಿಸಿದ ಆತ, ಸ್ಥಳೀಯ ಅಧಿಕಾರಿಗಳು ಆದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.
ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡದಂತೆ ಬಾಲಕನಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಶಿಕ್ಷಣವೇ ಅವನ ಮೊದಲ ಆದ್ಯತೆಯಾಗಬೇಕು ಎಂದು ನೆನಪಿಸಿದರು. ಜೊತೆಗೆ, ಅವನ ದೂರನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಈ ವಿವಾದದ ಕುರಿತು ತನಿಖೆ ನಡೆಸುವಂತೆ ಅವರು ಆದೇಶಿಸಿದರು.

