ಜೌನ್ಪುರ : ಮೊಬೈಲ್ ಫೋನ್ ಚಾಟ್ ವಿಷಯವಾಗಿ ನಡೆದ ಜಗಳದ ಬಳಿಕ 38 ವರ್ಷದ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕತ್ತು ಸೀಳಿ ಹತ್ಯೆಗೈದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಜೌನ್ಪುರ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಗುಜರಾತ್ ಮೂಲದ ಹೇಮ್ ಖಾಖರಿಯಾ ಆಲಿಯಾಸ್ ದಿಲೀಪ್ (42) ಎಂದು ಗುರುತಿಸಲಾಗಿದೆ. ಗುಜರಾತ್ನ ನಿವಾಸಿಯಾದ ಈತ ಪ್ರಸ್ತುತ ಜೌನ್ಪುರದ ಮಡಿಯಾಹು ಪ್ರದೇಶದ ಟೀಚರ್ಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದ. ಹತ್ಯೆಯಾದ ಮಹಿಳೆಯನ್ನು ರೇಷ್ಮಾ ಖಾನ್ ಆಲಿಯಾಸ್ ಸನಾ ಎಂದು ಗುರುತಿಸಲಾಗಿದೆ.
ಮಡಿಯಾಹು ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪುರ ಬೈಪಾಸ್ ಸಮೀಪ ಪೊದೆಯಲ್ಲಿ ಕಪ್ಪು ಪಾಲಿಥಿನ್ ಚೀಲದಲ್ಲಿ ಸುತ್ತಿಟ್ಟಿದ್ದ ಮುಂಡವನ್ನು ಸ್ಥಳೀಯ ನಿವಾಸಿಗಳು ರವಿವಾರ ಬೆಳಗ್ಗೆ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಜುಲೈ 4ರಂದು ಹೇಮಲ್, ರೇಷ್ಮಾಳನ್ನು ವಾರಣಾಸಿಯ ಬಾಬತ್ಪುರದಿಂದ ಟೀಚರ್ಸ್ ಕಾಲನಿಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆ ತಂದಿದ್ದ. ಮನೆಯಲ್ಲಿದ್ದಾಗ ಮೊಬೈಲ್ ಫೋನ್ಲ್ಲಿದ್ದ ಚಾಟ್ಗಳನ್ನು ನೋಡುವ ವಿಷಯದಲ್ಲಿ ಇಬ್ಬರ ನಡುವ ಜಗಳ ನಡೆದಿತ್ತು. ಆ ಸಮಯದಲ್ಲಿ ಜಗಳ ತಣ್ಣಗಾದಂತೆ ಕಂಡರೂ ಆರೋಪಿ ಮಾತ್ರ ತೀವ್ರ ಆಕ್ರೋಶದಲ್ಲಿದ್ದ. ಮಹಿಳೆ ನಿದ್ದೆಗೆ ಜಾರಿದ ನಂತರ ಆತ ಚಾಕುವಿನಿಂದ ಆಕೆಯ ಕತ್ತು ಸೀಳಿ ಹತ್ಯೆಗೈದಿದ್ದಾನೆ.
ಅನಂತರ ಆತ ಹತ್ತಿರದ ಮಾರುಕಟ್ಟೆಗೆ ಹೋಗಿ ಕಪ್ಪು ಪಾಲಿಥಿನ್ ಚೀಲಗಳನ್ನು ಖರೀದಿಸಿ ತಂದಿದ್ದಾನೆ. ಅನಂತರ ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ಕೈ ಮತ್ತು ಕಾಲುಗಳನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಪ್ಯಾಕ್ ಮಾಡಿದ್ದಾನೆ. ದೇಹದ ಮುಂಡ ಭಾಗವನ್ನು ರಾಣಿಪುರ ಬೈಪಾಸ್ ಬಳಿ ಎಸೆದಿದ್ದರೆ, ಕಾಲುಗಳು ಮತ್ತು ಇತರ ಭಾಗಗಳನ್ನು ರಾಮನಗರ ಬ್ಲಾಕ್ ಕ್ರಾಸಿಂಗ್ ಸಮೀಪದ ಸಣ್ಣ ಸೇತುವ ಹತ್ತಿರ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಹದ ಒಂದು ಭಾಗ ಈಗಾಗಲೇ ಪತ್ತೆಯಾಗಿದೆ ಮತ್ತು ಪೊಲೀಸರು ತನಿಖೆ ಚುರುಕುಗೊಳಿಸಿ ಮೃತರ ಗುರುತು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಆರೋಪಿ ಗಾಬರಿಗೊಂಡಿದ್ದ.
ಮಡಿಯಾಹು ಸರ್ಕಲ್ ಅಧಿಕಾರಿಯ ಪ್ರಕಾರ, ಇನ್ನುಳಿದ ದೇಹದ ಭಾಗಗಳನ್ನು ಬೇರೆಡೆಗೆ ಸಾಗಿಸಲು ಹೇಮಲ್ ರವಿವಾರ ತಡ ರಾತ್ರಿ ಹೊರಟಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ರಾಮನಗರ ಬ್ಲಾಕ್ ಗೇಟ್ ಬಳಿ ಜಾಲ ಬೀಸಿ ಆತನನನ್ನು ಸೆರೆ ಹಿಡಿದಿದ್ದಾರೆ.

