ರಾಂಚಿ: ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಜಾರ್ಖಂಡ್ ಪೊಲೀಸರ ಕ್ರಮವನ್ನು ಖಂಡಿಸಿ, ವಿಧಾನಸಭೆಯತ್ತ ಮಂಗಳವಾರ ಮೆರವಣಿಗೆ ಹೊರಟ್ಟಿದ್ದ ಎಬಿವಿಪಿಯ 110ಕ್ಕೂ ಹೆಚ್ಚು ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.
ಹಳೆಯ ವಿಧಾನಸಭಾ ಪ್ರದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಮೆರವಣಿಗೆ ಆರಂಭಿಸಿದ ಬೆನ್ನಲ್ಲೇ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಸ್ ಹತ್ತಿಸಿದರು. ಆದರೆ ಪ್ರತಿಭಟನೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಬಸ್ ಸಾಗಲು ಅವಕಾಶ ನೀಡಲಿಲ್ಲ. ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆಯಿತು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲ ಮಹಿಳಾ ಪ್ರತಿಭಟನಕಾರರನ್ನೂ ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆ ವೇಳೆ ಒಬ್ಬ ಯುವತಿ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿಬಿದ್ದರು. ಇತರ ಪ್ರತಿಭಟನಕಾರರು ಅವರಿಗೆ ನೀರುಣಿಸಿ ಉಪಚರಿಸಿದರು.
'ವಿಧಾನಸಭೆಯತ್ತ ಮೆರವಣಿಗೆ ಹೊರಟಿದ್ದ ಎಬಿವಿಪಿಯ ಸುಮಾರು 110 ಸದಸ್ಯರನ್ನು ವಶಕ್ಕೆ ಪಡೆಯಲಾಗಿದ್ದು, ಯಾರನ್ನೂ ಬಂಧಿಸಿಲ್ಲ' ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪರಸ್ ರಾಣಾ ಮಾಹಿತಿ ನೀಡಿದ್ದಾರೆ.
ಸರ್ಕಾರ ಯುವಜನರು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಎಬಿವಿಪಿ ಸದಸ್ಯ ಕುಮಾರ್ ದಿವ್ಯಾಂಶು ಕಿಡಿಕಾರಿದರು.

