ಕಾಸರಗೋಡು: ಓಣಂ ಹಬ್ಬದ ಕಾಲಾವಧಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ರಾಜ್ಯ ಸರ್ಕಾರ 1,65,000 ಮೆಟ್ರಿಕ್ ಟನ್ ಅಕ್ಕಿಯನ್ನು ವಿತರಿಸಲಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು, ತೂಕಮತ್ತು ಅಳತೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಅನೂಪ್ ಜೇಕಬ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಗುಣಮಟ್ಟದ ಸರಕುಗಳನ್ನು ಪಾರದರ್ಶಕವಾಗಿ ತಲುಪಿಸುವುದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಆದ್ಯತೆ ನೀಡುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ಅವರು ವೆಳ್ಳರಿಕುಂಡುವಿನ ದರ್ಶನ ಸಭಾಂಗಣದಲ್ಲಿ ಬುಡಕಟ್ಟು ಸಮುದಾಯಗಳಿಗೆ ಪಡಿತರ ಧಾನ್ಯಗಳ ವಿತರಣೆ ಮತ್ತು ಬುಡಕಟ್ಟು ಸಮುದಾಯಗಳಿಗೆ ಪಡಿತರ ಧಾನ್ಯಗಳನ್ನು ವಿತರಿಸುವ 'ಮೊಬೈಲ್ ಪಡಿತರ ಅಂಗಡಿ' ಸೇವೆಯ ರಾಜ್ಯಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೂರದ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ನೇರವಾಗಿ ಪಡಿತರ ಧಾನ್ಯ ತಲುಪಿಸುವ ಸಂಚಾರಿ ಪಡಿತರ ಅಂಗಡಿಗಳನ್ನು ವಿಸ್ತರಿಸುವುದು ಸರ್ಕಾರದ ನೂರು ದಿವಸಗಳ ಕ್ರಿಯಾ ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಇಪಿಒಎಸ್ ಯಂತ್ರಗಳೊಂದಿಗೆ ಸಂಪರ್ಕಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.
ಬಳಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ. ಲತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಳ್ಳಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ರಜಿತಾ, ಬಳಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜು ಕಟ್ಟಕ್ಕಯಂ, ಇತರ ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಆಯುಕ್ತೆ ಹಿಮಾ ಕೆ. (ಐಎಎಸ್) ಸ್ವಾಗತಿಸಿದರು. ಪಡಿತರ ನಿಯಂತ್ರಣಾಧಿಕಾರಿ ಸಿ.ವಿ. ಮೋಹನಕುಮಾರ್ ವಂದಿಸಿದರು.



