ಇಂದೋರ್: ಮೇಘಾಲಯದಲ್ಲಿ ಹನಿಮೂನ್ ವೇಳೆಯಲ್ಲಿ ಹತ್ಯೆಗೀಡಾಗಿದ್ದ ಉದ್ಯಮಿ ರಾಜಾ ರಘುವಂಶಿ ಅವರ ವಿವಾಹವಾಗಿ ಸುಮಾರು 15 ತಿಂಗಳ ಬಳಿಕ ₹2.82 ಲಕ್ಷ ಬಾಕಿ ಹಣವನ್ನು ಕೊಡಿಸುವಂತೆ ಕೋರಿ ಮದುವೆಗೆ ಕೇಟರಿಂಗ್ ಒದಗಿಸಿದ್ದ ವ್ಯಕ್ತಿಯೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.
ಆದರೆ ಇದು ಹಣಕಾಸು ಸಂಬಂಧಿತ ವಿಚಾರವಾಗಿರುವುದರಿಂದ ಸಿವಿಲ್ ವ್ಯಾಜ್ಯಕ್ಕೆ ಸೇರುತ್ತದೆ. ಹೀಗಾಗಿ ಮಧ್ಯಪ್ರವೇಶಿಸಲು ಬರುವುದಿಲ್ಲ ಎಂದು ದೂರು ದಾಖಲಿಸಿಕೊಳ್ಳಲು ನಿರಾಕರಿಸಿರುವುದಾಗಿ ದ್ವಾರಕಾಪುರಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬಾಕಿ ಮೊತ್ತಕ್ಕಾಗಿ ಎರಡೂ ಕುಟುಂಬಗಳನ್ನು ಹಲವು ಬಾರಿ ಸಂಪರ್ಕಿಸಿದ್ದರೂ, ಉಭಯ ಕಡೆಯವರು ಪರಸ್ಪರ ಒಬ್ಬರ ಮೇಲೊಬ್ಬರು ಸಾಲದ ಹೊಣೆ ಹೊರಿಸುತ್ತಿದ್ದಾರೆ ಎಂದು ಕೇಟರರ್ ದೂರಿದ್ದಾರೆ.
ಈ ಬಗ್ಗೆ ಮಾತನಾಡಿದ ಇಂದೋರ್ ಮೂಲದ ಕೇಟರರ್ ಹಿತೇಶ್ ರೋಹಿರಾ, 'ರಾಜಾ ರಘುವಂಶಿ ಮತ್ತು ಸೋನಮ್ ಕುಟುಂಬಸ್ಥರು ಜಂಟಿಯಾಗಿ ₹11.42 ಲಕ್ಷ ಮೊತ್ತದ ಕೇಟರಿಂಗ್ ಗುತ್ತಿಗೆ ನೀಡಿದ್ದರು. ಇದರಲ್ಲಿ ₹8.60 ಲಕ್ಷ ಪಾವತಿಯಾಗಿದ್ದು, ₹2.82 ಲಕ್ಷ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.
ರಾಜಾ ರಘುವಂಶಿ ಅವರ ಸಹೋದರ ವಿಪಿನ್ ರಘುವಂಶಿ ಮತ್ತು ಸೋನಮ್ ಅವರ ಸಹೋದರ ಗೋವಿಂದ್ ರಘುವಂಶಿ ಅವರಿಗೆ ಏಪ್ರಿಲ್ 1ರಂದು ನೋಟಿಸ್ ಕಳುಹಿಸಿದ್ದರೂ ಹಣ ಬಂದಿಲ್ಲ. ಹೀಗಾಗಿ ದ್ವಾರಕಾಪುರಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾಗಿ ರೋಹಿರಾ ಹೇಳಿದ್ದಾರೆ.
ಇದು ಸಿವಿಲ್ ವ್ಯಾಜ್ಯವಾಗಿರುವುದರಿಂದ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ದ್ವಾರಕಾಪುರಿ ಪೊಲೀಸ್ ಠಾಣಾಧಿಕಾರಿ ಮನೀಶ್ ಮಿಶ್ರಾ ತಿಳಿಸಿದ್ದಾರೆ.
ಕೇಟರರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜಾ ರಘುವಂಶಿ ಸಹೋದರ ವಿಪಿನ್, ಕೇಟರರ್ಗೆ ಆರ್ಡರ್ ಕೊಟ್ಟಿದ್ದು ಸೋನಮ್ ಸಹೋದರ ಗೋವಿಂದ್. ನಮಗೂ ಅವರಿಗೂ ಯಾವುದೇ ವ್ಯವಹಾರ ಬಾಕಿ ಇಲ್ಲ ಎಂದಿದ್ದಾರೆ. ಇತ್ತ ಸೋನಮ್ ಸಹೋದರ ಗೋವಿಂದ್ ಪ್ರತಿಕ್ರಿಯಿಸಿ, ಬಹುತೇಕ ಹಣ ಚುಕ್ತಾ ಮಾಡಲಾಗಿದೆ. 15 ತಿಂಗಳ ನಂತರ ಅಗ್ಗದ ಪ್ರಚಾರಕ್ಕಾಗಿ ಕೇಟರರ್ ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಘಟನೆಯ ಹಿನ್ನೆಲೆ
ಪತ್ನಿ ಸೋನಮ್ ಜತೆ ಮಧುಚಂದ್ರಕ್ಕೆ ಬಂದಿದ್ದಾಗ 2025ರ ಮೇ 26ರಂದು ರಾಜಾ ನಾಪತ್ತೆಯಾಗಿದ್ದರು. ಜೂನ್ 2ರಂದು ಸೊಹ್ರಾ ಸಮೀಪದ ವೀಸಾಡೊಂಗ್ ಜಲಪಾತದ ಕಣಿವೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಪತ್ನಿಯೇ ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಕೊಲೆ ಮಾಡಿದ್ದು ತನಿಖೆಯಲ್ಲಿ ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಮ್ ಪ್ರಿಯಕರ ರಾಜ್ ಕುಶ್ವಾಹ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇವರಿಬ್ಬರು ಸೇರಿಕೊಂಡು ಅಖಿಲೇಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್, ಆನಂದ್ ಕುರ್ಮಿ ಎಂಬುವರ ಸಹಾಯ ಪಡೆದು ರಾಜಾ ರಘುವಂಶಿಯನ್ನು ಕೊಲೆ ಮಾಡಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

