ಕೋಲ್ಕತ್ತ : 'ಜೈಷ್-ಇ-ಮೊಹಮ್ಮದ್ (ಜೆಇಎಂ)ನ ಶಂಕಿತ ಉಗ್ರ ಹಮೀಮ್ ಮೊಂಡಲ್ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ನಿವಾಸದ ಸ್ಥಳದ ಮಾಹಿತಿ ಕಲೆಹಾಕಿದ್ದು, ಪಾಕಿಸ್ತಾನದ ಹ್ಯಾಂಡ್ಲರ್ಗಳ ಜೊತೆ ಸೇರಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯದ ಸಂಚು ರೂಪಿಸಿದ್ದನು' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿ ಎಸ್ಟಿಎಫ್ ತಂಡದ ಸದಸ್ಯರು ಮೊಂಡಲ್ನನ್ನು ಬಂಧಿಸಿದ್ದರು. ಈತನೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಅರ್ಪಿತಾ ಸರ್ಕಾರ್, ಆದಿತ್ಯ ಸಿನ್ಹಾ ಎಂಬವರನ್ನು ಬಂಧಿಸಿದ್ದರು.
ಮುಖ್ಯಮಂತ್ರಿಯವರ ಚಲನವಲನ, ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಅವರ ಭದ್ರತೆಯಲ್ಲಿನ ಲೋಪಗಳನ್ನು ಆರೋಪಿಯು ಗುರುತಿಸಿರುವುದು ವಿಚಾರಣೆಯ ವೇಳೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸುವೇಂದು ಅವರ ಹಲವು ಕಾರ್ಯಕ್ರಮಗಳಲ್ಲಿ ಮೊಂಡಲ್ ಭಾಗವಹಿಸಿದ್ದನು. ಕೋಲ್ಕತ್ತದ ಛಿನಾರ್ ಪಾರ್ಕ್ನಲ್ಲಿರುವ ಮುಖ್ಯಮಂತ್ರಿಯವರ ನಿವಾಸದ ಸುತ್ತಲಿನ ಸ್ಥಳದ ಮಾಹಿತಿ ಕಲೆಹಾಕಿದ್ದ. ವಿಚಾರಣೆಯ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದನ್ನು ನಿರಾಕರಿಸಿದ್ದನು. ಮೊಬೈಲ್ ಟವರ್ ಲೊಕೇಶನ್, ತಾಂತ್ರಿಕ ಮಾಹಿತಿಗಳನ್ನು ತಾಳೆಹಾಕಿ ನೋಡಿದ ವೇಳೆ ಮುಖ್ಯಮಂತ್ರಿ ನಿವಾಸ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿರುವುದು ಖಚಿತಪಟ್ಟಿದೆ' ಎಂದು ಎಸ್ಟಿಎಫ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಮುಖ್ಯಮಂತ್ರಿಯವರ ಸಂಭವನೀಯ ಭದ್ರತಾ ಲೋಪಗಳನ್ನು ಗುರುತಿಸಲು ರಾಜ್ಯ ಸಚಿವಾಲಯ 'ನಬನ್ನಾ'ಕ್ಕೂ ಭೇಟಿ ನೀಡಿದ್ದನೇ ಎಂಬುದರ ಕುರಿತು ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆತನಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ, ಯಾವುದೇ ವಿಚಾರವನ್ನೂ ತಳ್ಳಿ ಹಾಕುವಂತಿಲ್ಲ' ಎಂದು ವಿವರಿಸಿದ್ದಾರೆ.

