ನವದೆಹಲಿ: ದೇಶದಾದ್ಯಂತ ನಡೆದಿರುವ ₹30,000 ಕೋಟಿ ಮೌಲ್ಯದ ಸೈಬರ್ ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ತಿಳಿಸಿದೆ.
ಮುಂಬೈಯಲ್ಲಿ ಭಾನುವಾರ ಫಹೀಮ್ ಮೊಯಿನ್ ಹುಸೇನ್ ಸೈಯದ್ ಮತ್ತು ನೈಮ್ ಮುಯೀನ್ ಸೈಯದ್ ಎಂದು ಗುರುತಿಸಲಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2025ರ ಮೇ ಮತ್ತು ಜೂನ್ನಲ್ಲಿ ಗೋವಾದ ಮಹಿಳೆಯೊಬ್ಬರಿಂದ ₹2.60 ಕೋಟಿ ಹಣವನ್ನು ಸೈಬರ್ ವಂಚಕರು ದೋಚಿದ್ದರು. ಸಂತ್ರಸ್ತೆ ನೀಡಿದ ದೂರು ಆಧರಿಸಿ ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನತ್ತಿದ್ದರು.
ಈ ಸೈಬರ್ ಅಪರಾಧಿ ಜಾಲವು ₹27,000 ಕೋಟಿ ಮೌಲ್ಯದ ಬ್ಯಾಂಕ್ ವಹಿವಾಟು ಮತ್ತು ₹3,000 ಕೋಟಿ ನಗದು ವ್ಯವಹಾರ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಂಚಕರು ಈ ಹಣವನ್ನು 'ಮ್ಯೂಲ್ ಅಕೌಂಟ್'ಗಳಿಗೆ (ಮಧ್ಯವರ್ತಿ ಖಾತೆಗಳು) ವರ್ಗಾವಣೆ ಮಾಡಿದ್ದಾರೆ. ಬಳಿಕ ಎಟಿಎಂ ಅಥವಾ ನಗದು ಜಮೆ ಯಂತ್ರಗಳ ಮೂಲಕ ಹಣ ಡ್ರಾ ಮಾಡಿದ್ದಾರೆ. ಬಳಿಕ ಆರ್ಬಿಐ ಪರವಾನಗಿ ಪಡೆದ ಹಣ ವಿನಿಮಯ ಕೇಂದ್ರಗಳ ಮೂಲಕ ವಿದೇಶಿ ಕರೆನ್ಸಿಯಾಗಿ ಪರಿವರ್ತಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕೆಲವು ತಿಂಗಳಿಗಳಿಂದ ದೇಶದಾದ್ಯಂತ ಡಿಜಿಟಲ್ ಅರೆಸ್ಟ್ ಹಗರಣಗಳು ಹೆಚ್ಚಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕ್ರಿಮಿನಲ್ ಕಾನೂನಿನಡಿಯಲ್ಲಿ 'ಡಿಜಿಟಲ್ ಅರೆಸ್ಟ್' ಅನ್ನು ಪ್ರತ್ಯೇಕ ಅಪರಾಧವೆಂದು ವ್ಯಾಖ್ಯಾನಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಪ್ರಸ್ತುತ, ಕೇಂದ್ರ ತನಿಖಾ ದಳವು (ಸಿಬಿಐ) ₹10 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ 20 ಡಿಜಿಟಲ್ ವಂಚನೆ ಪ್ರಕರಣಗಳ ಕುರಿತು ತನಿಖೆ ಚುರುಕುಗೊಳಿಸಿದೆ. ಇವುಗಳಲ್ಲಿ ಹಲವು ನಕಲಿ ದಾಖಲೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಅಂತರರಾಷ್ಟ್ರೀಯ ಸಿಂಡಿಕೇಟ್ಗಳಿಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

