ನವದೆಹಲಿ: ದೇಶದ ಮೊದಲ ವರ್ಚ್ಯುವಲ್ ಮೃಗಾಲಯವನ್ನು ಇಂದೋರ್ನಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮದಲ್ಲಿ ಭಾರತವು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ.
ಇಲ್ಲಿನ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯದಲ್ಲಿ ಸುಮಾರು ₹4.5 ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಒಳಗೊಂಡ ವರ್ಚ್ಯುವಲ್ ಮೃಗಾಲಯವನ್ನು ನಿರ್ಮಿಸಲಾಗಿದೆ. ನಿಜವಾಗಿಯೂ ಕಾಡಿನೊಳಗೆ ಪ್ರವೇಶಿಸಿದ ಅನುಭವವನ್ನು ಈ ಮೃಗಾಲಯ ಪ್ರವಾಸಿಗರಿಗೆ ನೀಡುತ್ತದೆ.
ಸುಮಾರು 8 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತವಾದ ಡಿಜಿಟಲ್ ತಂತ್ರಜ್ಞಾನ ಆಧರಿತ ಸ್ಥಳವಿದೆ. ಇದರೊಳಗೆ 14ಡಿ ಸಿನಿಮಾ ಥಿಯೇಟರ್, ವರ್ಚ್ಯುವಲ್ ಜಂಗಲ್ ಸಫಾರಿ ಹಾಗೂ ಹೊಲೊಗ್ರಾಮ್ ವ್ಯವಸ್ಥೆಯಿದೆ. ಇದರ ಮೂಲಕ ವನ್ಯಜೀವಿಗಳನ್ನು ನೈಜವಾಗಿಯೇ ನೋಡಿದ ಅನುಭವ ಮತ್ತು ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬಹುದಾಗಿದೆ.
14ಡಿ ಚಿತ್ರಮಂದಿರದ ಅನುಭವ
ಈ ಮೊದಲು ಮೃಗಾಲಯಗಳಿಗೆ ಹೋದಾಗ ಕಾಡು ಪ್ರಾಣಿಗಳನ್ನು ದೂರದಿಂದ ನೋಡಬೇಕಿತ್ತು. ಆದರೆ, ಈಗ ಕಾಲ ಬದಲಾಗಿದೆ. ಕಾಡಿನಲ್ಲಿರುವ ವಾತಾವರಣವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮರು ಸೃಷ್ಟಿಸಲಾಗಿದೆ. ಕಾಡಿನಲ್ಲಿರುವಂತೆ ದೊಡ್ಡ ಮರಗಳು, ಗಾಳಿ, ಮಂಜಿನ ಹನಿಗಳು, ಅಮೆಜಾನ್ ಮಳೆಕಾಡುಗಳು ಹಾಗೂ ಆಫ್ರಿಕಾದ ಸಫಾರಿಯ ನೈಜ ಅನುಭವವನ್ನು ಇಲ್ಲಿ ಪಡೆಯಬಹುದು. ನಾವು ನಿಜವಾಗಿಯೂ ಕಾಡಿನಲ್ಲಿಯೇ ಇದ್ದೇವೆ ಎಂಬ ಅನುಭವ ನೀಡುತ್ತದೆ. ಈ 14ಡಿ ಚಿತ್ರಮಂದಿರದ ಪರದೆಯನ್ನು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ.
ವರ್ಚ್ಯುವಲ್ ಜಂಗಲ್ ಸಫಾರಿ
ವರ್ಚ್ಯುವಲ್ ಜಂಗಲ್ ಸಫಾರಿಯು ಪ್ರೇಕ್ಷಕರಿಗೆ ರೋಮಾಂಚನವನ್ನು ಉಂಟು ಮಾಡುತ್ತದೆ. 3ಡಿ ಡೋಮ್ ಥಿಯೇಟರ್ ತಂತ್ರಜ್ಞಾನದ ಸಹಾಯದಿಂದ ಪ್ರವಾಸಿಗರು ಕಾಡಿನೊಳಗೆ ನಿಜವಾಗಿಯೂ ಪ್ರಯಾಣಿಸುತ್ತಿರುವಂತಹ ಅನುಭೂತಿ ಪಡೆಯಬಹುದು. ಇದರ ಜತೆಗೆ ಕಾಡಿನ ವಿವಿಧ ಭಾಗಗಳಲ್ಲಿ ಪ್ರಾಣಿಗಳಿರುವುದನ್ನು ನೋಡುತ್ತ ಸಾಗಬಹುದು.
ಹೊಲೊಗ್ರಾಮ್ಗಳು
ಈ ತಂತ್ರಜ್ಞಾನವನ್ನು ಬಳಸಿಕೊಂಡು ವನ್ಯಜೀವಿಗಳು ನಮ್ಮ ಕಣ್ಣೆದುರೇ ಜೀವಂತವಾಗಿ ಓಡಾಡುತ್ತಿರುವಂತೆ ಮಾಡಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಾಗತ ಕೋರಲು ಕಪ್ಪು ಮುಖದ ಕೋತಿ (ಲಂಗೂರ್)ಗಳ ಹೊಲೊಗ್ರಾಮ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಜತೆಗೆ ಕನ್ನಡಿ ಸೇತುವೆ, ಫೋಟೊ ಮತ್ತು ಸೆಲ್ಫಿ ಸ್ಪಾಟ್ಗಳೂ ಇವೆ.
ಭೇಟಿ ನೀಡಬಹುದಾದ ಸಮಯ
ಮಂಗಳವಾರದಿಂದ ಭಾನುವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಭೇಟಿ ನೀಡಬಹುದು. ಪ್ರತಿ ವ್ಯಕ್ತಿ ₹70 ಅನ್ನು ಶುಲ್ಕವನ್ನು ನಿಗದಿಪಡಿಸಿದೆ. 20 ನಿಮಿಷದ ಪ್ರದರ್ಶನವಿರುತ್ತದೆ.
ಕರ್ನಾಟಕದ ಮೊದಲ ಪ್ರಯತ್ನ
ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ವರ್ಚ್ಯುವಲ್ ರಿಯಾಲಿಟಿ ಮೂಲಕ ಇಲ್ಲಿನ ಅರಣ್ಯ ಪ್ರದೇಶದ ಸೌಂದರ್ಯವನ್ನು ತೋರಿಸುವ ಪ್ರಯತ್ನವನ್ನು ಮಾಡಲಾಗಿತ್ತು.

