ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್ಡಿಎ) ಅಧಿಕಾರಿಯೊಬ್ಬರನ್ನು ಸಾರ್ವಜನಿಕರು ಸುತ್ತುವರಿದು, ಅವರಿಗೆ ಎಕ್ಸ್ಪೈರಿ (ಅವಧಿ ಮುಗಿದ) ಆದ ಬಿಸ್ಕತ್ಗಳನ್ನು ತಿನ್ನಿಸಲು ಯತ್ನಿಸಿದ್ದಾರೆ.
'ನೀವೇ ಇವುಗಳನ್ನು ತಿನ್ನಿ' ಎಂದು ಕೂಗಾಡಿದ ಜನರು, ಅಂಗಡಿ ಮಾಲೀಕನನ್ನು ಕಾಪಾಡಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಅಧಿಕಾರಿಯನ್ನು ಸುತ್ತುವರಿದ್ದರು. ಈ ಗದ್ದಲದ ನಡುವೆ ಕೆಲವರು, ಬಿಸ್ಕತ್ಗಳನ್ನು ಅಧಿಕಾರಿಯ ಬಾಯಿಗೆ ತುರುಕಲು ಯತ್ನಿಸಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಪಾನ್ ಅಂಗಡಿಯೊಂದರಲ್ಲಿ ಎಕ್ಸ್ಪೈರಿ ಡೇಟ್ (ಅವಧಿ ಮುಗಿದ) ಆದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಅಂಗಡಿಯಿಂದ ಖರೀದಿಸಿದ ಖಾರ ತಿಂದ ಎರಡು ವರ್ಷದ ಮಗುವಿಗೆ ದಿಢೀರ್ ಅಸ್ವಸ್ಥತೆ ಮತ್ತು ತಲೆಸುತ್ತು ಕಾಣಿಸಿಕೊಂಡಿತ್ತು. ಮಗುವಿನ ಸ್ಥಿತಿ ಹದಗೆಟ್ಟಿದ್ದರಿಂದ ಕುಟುಂಬಸ್ಥರು ತಕ್ಷಣ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
ಈ ಘಟನೆಯು ಮಗುವಿನ ಸಂಬಂಧಿಕರು ಮತ್ತು ಇತರ ನಿವಾಸಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ತಕ್ಷಣ ಛತ್ರಪತಿ ಸಂಭಾಜಿನಗರದ ಎಫ್ಡಿಎ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಿದ್ದರು.
ದೂರಿನ ಬೆನ್ನಲ್ಲೇ ಎಫ್ಡಿಎ ಅಧಿಕಾರಿಯೊಬ್ಬರು ಅಂಗಡಿಯಲ್ಲಿ ತಪಾಸಣೆ ನಡೆಸಲು ಮುಂದಾಗಿದ್ದರು. ಆದರೆ, ತಪಾಸಣೆಗೂ ಮುನ್ನವೇ ಘಟನೆಗೆ ಕಾರಣವಾದ ಖಾರದ ಪಟ್ಟಣಗಳನ್ನು ಅಂಗಡಿಯಿಂದ ತೆರವುಗೊಳಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಪಾಸಣೆ ವೇಳೆ, ಅಂಗಡಿಯಲ್ಲಿ ಮಾರಾಟಕ್ಕಿಡಲಾಗಿದ್ದ ಅವಧಿ ಮುಗಿದ ಹಲವು ಬಿಸ್ಕತ್ ಪ್ಯಾಕೆಟ್ಗಳು ಅಧಿಕಾರಿಗೆ ಸಿಕ್ಕಿವೆ ಎನ್ನಲಾಗಿದೆ. ಇವುಗಳನ್ನು ಜಪ್ತಿ ಮಾಡಿದರೂ, ಅಂಗಡಿ ಮಾಲೀಕನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಅಂಗಡಿ ಮಾಲೀಕನ ಬಳಿ ಎಫ್ಡಿಎ ಅಧಿಕಾರಿ ಲಂಚ ಪಡೆದಿದ್ದು, ವಿವಾದವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ನೆರೆದಿದ್ದ ಜನ ದೂರಿದ್ದಾರೆ.
ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಸ್ಥಳೀಯರು ಅಧಿಕಾರಿಯನ್ನು ಸುತ್ತುವರಿದಿದ್ದಾರೆ. 'ಈ ಬಿಸ್ಕತ್ಗಳು ತಿನ್ನುವುದಕ್ಕೆ ಸುರಕ್ಷಿತವಾಗಿದ್ದರೆ ನೀವೇ ತಿನ್ನಿ' ಎಂದು ಸವಾಲು ಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಎಫ್ಡಿಎ ಅಧಿಕಾರಿಗಳು ರಾಜ್ಯದಾದ್ಯಂತ ಆಹಾರ ಸುರಕ್ಷತಾ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.

