ಹೈದರಾಬಾದ್: ತೆಲಂಗಾಣ ರಕ್ಷಣಾ ಸೇನಾ (ಟಿಆರ್ಎಸ್) ನಾಯಕಿ ಕೆ. ಕವಿತಾ ಅವರು ಇತ್ತೀಚಿಗೆ ಕಾರ್ಯಕರ್ತರೊಬ್ಬರ ಮದುವೆಯಲ್ಲಿ ಭಾಗಿಯಾಗಿ, ಸಂಪ್ರದಾಯದಂತೆ ವಧುವಿನ ಕತ್ತಿಗೆ ಮಂಗಳಸೂತ್ರ ಕಟ್ಟಿದ್ದಾರೆ.
ಹೈದರಾಬಾದ್ 'ಮುದಿರಾಜ್' ಸಮುದಾಯದಲ್ಲಿ ವರ ವಧುವಿಗೆ ತಾಳಿ ಕಟ್ಟುವ ಮುನ್ನ ವರನ ತಂಗಿ ಅಥವಾ ಹಿರಿಯ ಮಹಿಳೆಯರು ವಧುವಿಗೆ ಅರಿಸಿನ ದಾರ ಕಟ್ಟುವ ಸಂಪ್ರದಾಯ ರೂಡಿಯಲ್ಲಿದೆ ಎಂದು 'ಹೈದರಾಬಾದ್ ಮೇಲ್' ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಅದರಂತೆ, ವರನಿಗೆ ಸಹೋದರಿಯರು ಇಲ್ಲದ ಕಾರಣ ಕುಟುಂಬಸ್ಥರ ಒತ್ತಾಯದ ಮೇರೆಗೆ ಕವಿತಾ ಅವರು ವಧುವಿನ ಕತ್ತಿಗೆ ತಾಳಿ ಕಟ್ಟುವ ಮೂಲಕ ಮನೆಯ ಮಗಳ ಸ್ಥಾನದಲ್ಲಿ ನಿಂತು ಮದುವೆ ನಡೆಸಿಕೊಟ್ಟಿದ್ದಾರೆ.
ಪಕ್ಷದ ಕಾರ್ಯಕರ್ತ ಬಾಲಪ್ರಸಾದ್ ಮತ್ತು ಶಿವಾನಿ ಮದುವೆಯಲ್ಲಿ ಕವಿತಾ ಅವರು ಭಾಗವಹಿಸಿದ್ದರು. ವರ -ವಧುವಿಗೆ ತಾಳಿ ಕಟ್ಟಿದ ಬಳಿಕ ನವ ದಂಪತಿಗೆ ಕವಿತಾ ಅವರು ಆಶೀರ್ವದಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಕವಿತಾ ಅವರು, ಮದುವೆಯ ವಿಡಿಯೊದ ತುಣುಕನ್ನು ಹಂಚಿಕೊಂಡಿದ್ದಾರೆ.
ಈ ಅಪರೂಪದ ಹಾಗೂ ಸಾಂಪ್ರದಾಯಿಕ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ. ವಿಡಿಯೊ ನೋಡಿದ ನೆಟ್ಟಿಗರು ಇದೆಂತಹ ಸಂಪ್ರದಾಯ ಎಂದಿದ್ದಾರೆ.

