ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಹಾಯಕರಾಗಿ (ಎಡಿಸಿ) ಸೇವೆ ಸಲ್ಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ 4 ಪ್ಯಾರಾ ವಿಶೇಷ ಪಡೆಗಳ ಅಧಿಕಾರಿ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಭಾರತೀಯ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಸೇನೆಯಿಂದ ಔಪಚಾರಿಕವಾಗಿ ನಿವೃತ್ತರಾದ ಬಳಿಕ ಅವರು ಆಗಸ್ಟ್ 21ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ರಾಷ್ಟ್ರಪತಿ ಭವನದ ಅಧಿಕೃತ ಡಿಜಿಟಲ್ ಫೋಟೊ ಲೈಬ್ರರಿಯಲ್ಲಿಯೂ ಅವರನ್ನು ನಿವೃತ್ತ ಮಾಜಿ ಎಡಿಸಿ ಎಂದು ದಾಖಲಿಸಲಾಗಿದೆ.
ನಂತರ ಪ್ರಕಟಿಸಿದ ಪೋಸ್ಟ್ ಗಳು ಮತ್ತು ವೀಡಿಯೊಗಳಲ್ಲಿ, ರಾಷ್ಟ್ರಪತಿಗಳ ಮಾರ್ಗದರ್ಶನ ಮತ್ತು ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಲು ಅವರನ್ನು ಭೇಟಿಯಾದುದಾಗಿ ಸಂಬ್ಯಾಲ್ ಹೇಳಿದ್ದಾರೆ.
ಗಣರಾಜ್ಯೋತ್ಸವದಿಂದ ರಾಷ್ಟ್ರಪತಿ ಭವನದವರೆಗೆ
ಸಂಬ್ಯಾಲ್ ಅವರು 2021ರಲ್ಲಿ ಜಾಟ್ ರೆಜಿಮೆಂಟ್ ನ ಕ್ಯಾಪ್ಟನ್ ಆಗಿದ್ದಾಗ ಸಾರ್ವಜನಿಕರ ಗಮನ ಸೆಳೆದಿದ್ದರು. ಆ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರೆಜಿಮೆಂಟ್ ನ ತುಕಡಿಯನ್ನು ಮುನ್ನಡೆಸಿದ್ದರು. ಆ ತುಕಡಿಗೆ ಅತ್ಯುತ್ತಮ ಮಾರ್ಚಿಂಗ್ ಕಾಂಟಿಂಜೆಂಟ್ ಟ್ರೋಫಿ ದೊರೆತಿತ್ತು.
ನಂತರ 'ಡ್ಯಾಗರ್ಸ್' ಎಂದು ಕರೆಯಲಾಗುವ 4 ಪ್ಯಾರಾ ವಿಶೇಷ ಪಡೆಗಳ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ ಅದನ್ನು ಪೂರ್ಣಗೊಳಿಸಿದ್ದರು. ಬಳಿಕ ಬಲಿದಾನ್ ಬ್ಯಾಡ್ಜ್ ಪಡೆದಿದ್ದರು. ಸ್ವಯಂಪ್ರೇರಿತರಾಗಿ ಈ ಆಯ್ಕೆ ಪ್ರಕ್ರಿಯೆಗೆ ಹಾಜರಾಗುವವರಲ್ಲಿ ಅಲ್ಪ ಸಂಖ್ಯೆಯವರು ಮಾತ್ರ ಈ ಗೌರವ ಪಡೆಯುತ್ತಾರೆ.
ಜಮ್ಮುವಿನ ಡೋಗ್ರಾ ರಜಪೂತ ಕುಟುಂಬದಿಂದ ಬಂದಿರುವ ಸಂಬ್ಯಾಲ್ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA)ಯಲ್ಲಿ ಮೂರು ವರ್ಷ ಹಾಗೂ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದರು. ಬಳಿಕ ಸುಮಾರು ಎಂಟು ವರ್ಷಗಳ ಕಾಲ ನಿಯೋಜಿತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಒಟ್ಟಾರೆ 12 ವರ್ಷಗಳ ಕಾಲ ಸೇನೆಯೊಂದಿಗೆ ಸಂಬಂಧ ಹೊಂದಿದ್ದರು.
2024-2025ರ ಅವಧಿಯಲ್ಲಿ ಅವರನ್ನು ರಾಷ್ಟ್ರಪತಿಯ ಎಡಿಸಿಯಾಗಿ ಆಯ್ಕೆ ಮಾಡಲಾಗಿತ್ತು. ಸಶಸ್ತ್ರ ಪಡೆಗಳಲ್ಲಿನ ಅತ್ಯಂತ ಪ್ರತಿಷ್ಠಿತ ಮತ್ತು ಸೂಕ್ಷ್ಮ ಕಾರ್ಯಯೋಜನೆಗಳಲ್ಲಿ ಎಡಿಸಿ ಹುದ್ದೆಯೂ ಒಂದು.
ಎಡಿಸಿಯ ಜವಾಬ್ದಾರಿಯಲ್ಲಿ ರಾಷ್ಟ್ರಪತಿಯ ಪ್ರೋಟೋಕಾಲ್ ನಿರ್ವಹಣೆ, ಅಧಿಕೃತ ಕಾರ್ಯಕ್ರಮಗಳು ಮತ್ತು ಪ್ರವಾಸಗಳಲ್ಲಿ ಅವರೊಂದಿಗೆ ತೆರಳುವುದು, ಸೂಕ್ಷ್ಮ ಸಮನ್ವಯ ನಡೆಸುವುದು ಹಾಗೂ ಸದಾ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವುದು ಸೇರಿದೆ.
ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ
ರಾಷ್ಟ್ರಪತಿಗೆ ಮಳೆಯಲ್ಲಿ ಛತ್ರಿ ಹಿಡಿದಿರುವುದು, ಭಾವನಾತ್ಮಕ ಸಂದರ್ಭದಲ್ಲಿ ಕರವಸ್ತ್ರ ನೀಡಿರುವುದು, ದೇವಾಲಯದ ಮೆಟ್ಟಿಲುಗಳಲ್ಲಿ ನೆರವಾಗಿರುವುದು ಹಾಗೂ ರಾಜ್ಯ ಕಾರ್ಯಕ್ರಮಗಳಲ್ಲಿ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿರುವ ಸಂಬ್ಯಾಲ್ ಅವರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಅನೇಕ ಬಳಕೆದಾರರು ಅವರನ್ನು 'ರಾಷ್ಟ್ರೀಯ ಕ್ರಶ್' ಎಂದು ಕರೆದಿದ್ದರು. 'ನಾನು ರಾಷ್ಟ್ರಪತಿಯಾಗಲು ಬಯಸುತ್ತೇನೆ' ಎಂಬಂತಹ ಕಮೆಂಟ್ ಗಳೂ ಬಂದಿದ್ದವು.
ಅವರು ತಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಬಳಕೆಯನ್ನು ಸೀಮಿತವಾಗಿಟ್ಟುಕೊಂಡಿದ್ದರೂ, ಅವರ ಹೆಸರಿನಲ್ಲಿ ಹಲವು ಅಭಿಮಾನಿಗಳ ಪೇಜ್ ಗಳು ಆರಂಭವಾಗಿದ್ದವು. ಅವರ ಶಾಂತ ಸ್ವಭಾವ, ಕರ್ತವ್ಯ ನಿರ್ವಹಣೆಯ ರೀತಿ ಮತ್ತು ರಾಷ್ಟ್ರಪತಿಯೊಂದಿಗಿನ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂಬಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ವೈಯಕ್ತಿಕ, ಕೌಟುಂಬಿಕ ಕಾರಣ
ನಿವೃತ್ತಿಯ ಬಳಿಕ ಪ್ರಕಟಿಸಿದ ವೀಡಿಯೊಗಳಲ್ಲಿ ಸಂಬ್ಯಾಲ್ ಅವರು ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ಸೇರಿದಂತೆ ಅವರ ವೀಡಿಯೊಗಳು ಹತ್ತಾರು ಸಾವಿರ ವೀಕ್ಷಣೆ ಪಡೆದಿವೆ.
ಸಮವಸ್ತ್ರ ಧರಿಸುವುದು ಬಾಲ್ಯದಿಂದಲೂ ತಮ್ಮ ಕನಸಾಗಿತ್ತು. ಅದನ್ನು ತೊರೆಯುವ ದಿನ ಬರುತ್ತದೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
'ಪ್ರತಿಯೊಬ್ಬರ ಜೀವನದಲ್ಲೂ ನಿಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸುವ ಸಂದರ್ಭಗಳು ಮತ್ತು ಘಟನೆಗಳು ಎದುರಾಗುತ್ತವೆ' ಎಂದು ಅವರು ಹೇಳಿದ್ದಾರೆ.
ಸೇನೆಯಿಂದ ಹೊರಬರುವ ನಿರ್ಧಾರವನ್ನು ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ತೆಗೆದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಕುಟುಂಬದ ಬೆಂಬಲವೂ ಇದೆ ಎಂದು ಹೇಳಿದ್ದಾರೆ. ತಾವು ಸಾಧಿಸಿರುವುದರ ಬಗ್ಗೆ ಸಂತೋಷವಿದೆ ಎಂದೂ ತಿಳಿಸಿದ್ದಾರೆ.
ತಕ್ಷಣ ವಿವಾಹವಾಗುವ ಯಾವುದೇ ಯೋಜನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 'ಮುಂದೆಯೂ ನಿಮ್ಮೊಂದಿಗೆ ಸೇರಿ ದೇಶಕ್ಕೆ ಕೊಡುಗೆ ನೀಡುತ್ತೇನೆ' ಎಂದು ಅವರು ಹೇಳಿದ್ದಾರೆ. ತಮ್ಮ ಮುಂದಿನ ಅಧ್ಯಾಯದ ಬಗ್ಗೆ ಸೂಕ್ತ ಸಮಯದಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ವಿಶೇಷ ಗಮನ ಸೆಳೆದ ನಿವೃತ್ತಿ
ನಿಗದಿತ ಸೇವಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಕೆಲವು ಸಂದರ್ಭಗಳಲ್ಲಿ ಸೇನಾ ಅಧಿಕಾರಿಗಳಿಗೆ ಸ್ವಯಂ ನಿವೃತ್ತಿ ಪಡೆಯಲು ಅವಕಾಶವಿದೆ. ಇತರ ಕೆಲವು ಸೇವೆಗಳಲ್ಲಿರುವ ಸ್ವಯಂಪ್ರೇರಿತ ನಿವೃತ್ತಿ ವ್ಯವಸ್ಥೆಗಿಂತ ಸೇನೆಯ ನಿಯಮಗಳು ಭಿನ್ನವಾಗಿವೆ.
ಸಂಬ್ಯಾಲ್ ಅವರ ನಿವೃತ್ತಿ ಅವರ ಸಾರ್ವಜನಿಕ ಜನಪ್ರಿಯತೆಯಿಂದಾಗಿ ವಿಶೇಷ ಗಮನ ಸೆಳೆದಿದೆ. ಎಡಿಸಿ ಹುದ್ದೆಯ ಬಳಿಕ ಅವರು ಮತ್ತೆ ವಿಶೇಷ ಪಡೆಗಳ ಕಾರ್ಯಾಚರಣಾ ಜವಾಬ್ದಾರಿಗೆ ಮರಳಬಹುದು ಎಂಬ ಊಹಾಪೋಹಗಳಿದ್ದವು. ಆದರೆ ಅವರು ಸೇನೆಯನ್ನೇ ಸಂಪೂರ್ಣವಾಗಿ ತೊರೆಯಲು ನಿರ್ಧರಿಸಿದ್ದಾರೆ.
ಎಡಿಸಿ ಹುದ್ದೆಯಲ್ಲಿದ್ದಾಗ ಸಾಮಾಜಿಕ ಮಾಧ್ಯಮದ ಮೂಲಕ ಸಂಬ್ಯಾಲ್ ಅವರು ಸಾರ್ವಜನಿಕರ ಗಮನ ಸೆಳೆದಿದ್ದರು. ಇದೀಗ ವೈಯಕ್ತಿಕ ಕಾರಣಗಳಿಂದ ಸೇನಾ ಸೇವೆಯಿಂದ ನಿವೃತ್ತರಾಗಿದ್ದಾರೆ.

