ಲಖನೌ: ಹೆಣ್ಣು ಮಕ್ಕಳ ವಯಸ್ಸನ್ನು ಕೇಳಬಾರದು ಎಂದು ಗಾದೆಯೇ ಇದೆ. ಆದರೆ, ಲಖನೌ ಮೂಲದ ವಿಜಯ ಕುಮಾರಿ ಎನ್ನುವ ಮಾಜಿ ಸೈನಿಕನ ಪತ್ನಿಗೆ ತನ್ನ ಹುಟ್ಟಿದ ದಿನದ ಕುರಿತು ಅಪಾರ ಹೆಮ್ಮೆಯಿದೆ.
'ನನ್ನ ವಯಸ್ಸು ನನ್ನ ದೇಶದ ವಯಸ್ಸಿನಷ್ಟೇ ಇದೆ' ಎಂದು ತಮ್ಮ ಆಧಾರ್ ಕಾರ್ಡ್ನಲ್ಲಿರುವ ಜನ್ಮ ದಿನಾಂಕವನ್ನು ನಗುತ್ತಾ ತೋರಿಸುತ್ತಾರೆ.
'ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ, ಭಾರತವು ಬ್ರಿಟಿಷರ ಆಡಳಿತದಿಂದ ಮುಕ್ತವಾಗಿದೆ ಎಂದು ಮಧ್ಯರಾತ್ರಿ ಭಾಷಣ ಮಾಡಿದ ಸಮಯದಲ್ಲೇ ನಾನು ವಾರಣಾಸಿಯಲ್ಲಿ ಜನಿಸಿದ್ದೆ' ಎಂದು ಸುದ್ದಿ ಸಂಸ್ಥೆ ಪಿಟಿಐ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನು ಪ್ರಾಥಮಿಕ ಶಾಲೆಯಲ್ಲಿದ್ದ ವೇಳೆ ನನ್ನ ಜನ್ಮದಿನಾಂಕದ ಕುರಿತು ನನ್ನ ಸ್ನೇಹಿತರು ಯಾವಾಗಲೂ ನನ್ನೊಂದಿಗೆ ಮಾತನಾಡುತ್ತಿದ್ದರು. ಶಾಲಾ ಕಾರ್ಯಕ್ರಮಗಳಲ್ಲಿ ಕೂಡ ಈ ಕುರಿತು ಚರ್ಚೆಯಾಗುತ್ತಿತ್ತು. ನನ್ನ ಜನ್ಮ ದಿನವನ್ನು ದೇಶದಾದ್ಯಂತ ಆಚರಿಸುತ್ತಾರೆ ಎಂದು ಪೋಷಕರು ಹೇಳುತ್ತಿದ್ದರು. ನಾನು ಸ್ವಾತಂತ್ರ್ಯ ಬಂದ ದಿನವೇ ಹುಟ್ಟಿದ್ದರಿಂದ ಅದರ ನೆನಪಿಗಾಗಿ ನನಗೆ ವಿಜಯ ಎಂದು ಹೆಸರಿಟ್ಟಿದ್ದಾರೆ ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಹುಟ್ಟಿದ ದಿನಾಂಕ ಮತ್ತು ಸಮಯವು ಭಾರತದ ಸ್ವಾತಂತ್ರ್ಯ ಬಂದ ಸಮಯದೊಂದಿಗೆ ಹೋಲಿಕೆಯಾಗುವುದರಿಂದ, ನನ್ನ ಭವಿಷ್ಯವು ದೇಶದ ಭವಿಷ್ಯದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ವಿವಾಹದ ನಂತರ ನನ್ನ ಪತಿ ಆಗಾಗ್ಗೆ ಹೇಳುತ್ತಿದ್ದರು ಎಂದು ಭಾವುಕರಾದರು.
1965ರ ಪಾಕಿಸ್ತಾನ ವಿರುದ್ಧದ ಯುದ್ಧದ ವೇಳೆ 25 ವರ್ಷವಿದ್ದಾಗಲೇ ನನ್ನ ಗಂಡ ಮೇಜರ್ ಧೀರೇಂದ್ರ ನಾಥ್ ಸಿಂಗ್ ಅವರು ಕುಮಾವೂನ್ ರೆಜಿಮೆಂಟ್ನ ಬೆಟಾಲಿಯನ್ ಒಂದರ ಕಂಪನಿಯನ್ನು ಮುನ್ನಡೆಸುತ್ತಿದ್ದರು. ಈ ಪಡೆಯು 'ಕೆರಿ' ಪ್ರದೇಶವನ್ನು ವಶಪಡಿಸಿಕೊಳ್ಳುವ ಆದೇಶವನ್ನು ಪಡೆದಿತ್ತು. ಈ ವೇಳೆ ಶತ್ರುಗಳ ಮೈನ್ ಬಾಂಬ್ ಸ್ಫೋಟದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದರೂ ಸಹ ಅವರು ವೈರಿ ಸೇನೆಯನ್ನು ನಡುಗಿಸಿದ್ದರು. ಅವರಿಗೆ 'ವೀರ ಚಕ್ರ' ಪ್ರಶಸ್ತಿ ಲಭಿಸಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ ಎಂದು ವಿಜಯ ಅವರು ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ.
2025ರಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಧೀರೇಂದ್ರ ನಾಥ್ ಸಿಂಗ್ ಅವರು ಕೊನೆಯುಸಿರೆಳೆದರು.
ನನ್ನ ಇಬ್ಬರು ಗಂಡು ಮಕ್ಕಳು ಸೇನೆಯಲ್ಲಿ ಅಧಿಕಾರಿಗಳಾಗಿದ್ದಾರೆ. 2016ರಲ್ಲಿ ನನ್ನ ಮೊಮ್ಮಗ ಕೂಡ ಸೈನ್ಯಕ್ಕೆ ಸೇರಿಕೊಂಡಿದ್ದಾನೆ, ಮತ್ತೊಬ್ಬ ಮೊಮ್ಮಗ ಮಧ್ಯಪ್ರದೇಶದಲ್ಲಿ ಸೈನಿಕ ತರಬೇತಿ ಪಡೆದುಕೊಳ್ಳುತ್ತಿದ್ದಾನೆ. ನನ್ನ ಇಡೀ ಕುಟುಂಬವೇ ದೇಶಸೇವೆಯಲ್ಲಿ ತಮ್ಮ ಜೀವನವನ್ನು ಕಳೆದಿದೆ ಎಂದು ಹೆಮ್ಮೆಯಿಂದ ಹೇಳಿದರು.

