ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ದೇಶವು ಇಂದು 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಿಸುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ದೆಹಲಿಯ ಕೆಂಪು ಕೋಟೆ, ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನ ಸೇರಿದಂತೆ ಎಲ್ಲೆಡೆ ಧ್ವಜಾರೋಹಣ ನೆರವೇರಿದೆ.
ಮೋದಿ ಶುಭಾಶಯ
80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶುಭಾಶಯ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಧೈರ್ಯ, ತ್ಯಾಗ ಮತ್ತು ಅಚಲ ಬದ್ಧತೆಯೊಂದಿಗೆ ವಸಾಹತುಶಾಹಿ ಆಳ್ವಿಕೆಗೆ ಅಂತ್ಯ ಹಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರನ್ನು ಕೃತಜ್ಞತಾ ಭಾವದಿಂದ ಸ್ಮರಿಸುತ್ತೇವೆ. 'ವಿಕಸಿತ ಭಾರತ'ದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತಿರುವ ಹೊತ್ತಿನಲ್ಲಿ, ಆ ಎಲ್ಲ ವೀರರ ಕನಸುಗಳೂ ನಮಗೆ ನಿರಂತರವಾಗಿ ಪ್ರೇರಣೆ ನೀಡುತ್ತವೆ' ಎಂದಿದ್ದಾರೆ.
ಮುಂದುವರಿದು, '140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದೊಂದಿಗೆ, ದೇಶವು ಇಂದು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಹೊಸ ಶಿಖರವನ್ನು ಏರುತ್ತಿದೆ. ಪ್ರಗತಿಯ ಈ ಪಯಣವು ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕು ಪಡೆಯಲಿದೆ' ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಎಂಬುದು ನಿರಂತರ ಹೊಣೆಗಾರಿಕೆ: ಡಿ.ಕೆ ಶಿವಕುಮಾರ್
'ಸ್ವಾತಂತ್ರ್ಯ ಎಂಬುದು ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನಗಳ ಮೇಲೆ ಕಟ್ಟಲಾದ ಪ್ರಜಾಪ್ರಭುತ್ವದ ನಿರಂತರ ಹೊಣೆಗಾರಿಕೆ' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ಶುಭಾಶಯ ತಿಳಿಸಿ, ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ವ್ಯಕ್ತಿಗಳಿಗಿಂತ ವ್ಯವಸ್ಥೆಯೂ, ಆಡಳಿತಕ್ಕಿಂತ ಸಾರ್ವಜನಿಕರ ಹಿತಾಸಕ್ತಿಯೂ ಆದ್ಯತೆಯಾಗಬೇಕು ಎಂಬ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಸಮಾಜದ ಕಟ್ಟಕಡೆಯ ಪ್ರಜೆಗೂ ಘನತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ನವಭಾರತಕ್ಕೆ ನಾವು ನೀಡಬಹುದಾದ ಮಹತ್ತರವಾದ ಕೊಡುಗೆ' ಎಂದು ಹೇಳಿದ್ದಾರೆ.
'ವೈವಿಧ್ಯತೆಯೇ ನಮ್ಮ ದೇಶದ ಬಲ, ಸಾಮರಸ್ಯವೇ ನಮ್ಮ ಜೀವಾಳ. ಯಾವುದೇ ಭೇದ-ಭಾವಗಳಿಲ್ಲದೆ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಸಂರಕ್ಷಿಸಿ, ಸರ್ವರಿಗೂ ಉತ್ತಮ ಬದುಕು ಕಲ್ಪಿಸುವುದೇ ನಮ್ಮ ಸರ್ಕಾರದ ಪ್ರಮುಖ ಧ್ಯೇಯ. ನಾವೆಲ್ಲರೂ ಸೇರಿ ಸಮೃದ್ಧವಾದ, ಜಗತ್ತೇ ತಿರುಗಿ ನೋಡುವಂತಹ ಕರ್ನಾಟಕವನ್ನು ಕಟ್ಟಲು ಈ ಶುಭದಿನದಂದು ಸಂಕಲ್ಪ ತೊಡೋಣ' ಎಂದು ಕರೆ ನೀಡಿದ್ದಾರೆ.

