ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಬದುಕಿನ ಸುದೀರ್ಘ ಪಯಣ ಹಾಗೂ ಹೋರಾಟವನ್ನು ಒಳಗೊಂಡ ಆತ್ಮಕಥೆ 'ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್' (Triumph of the Indian Republic: My Life, My Struggles) ಕೃತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು ಕೋವಿಂದ್ ಜತೆಗಿನ ತಮ್ಮ ಸುದೀರ್ಘ ವರ್ಷಗಳ ಆತ್ಮೀಯ ಒಡನಾಟವನ್ನು ನೆನಪಿಸಿಕೊಂಡರು. ಕೋವಿಂದ್ ಅವರ ಮಾರ್ಗದರ್ಶನ ಮತ್ತು ಪ್ರೀತಿ ತಮ್ಮ ಆಡಳಿತಾವಧಿಯಲ್ಲಿ ಅತ್ಯಂತ ಮೌಲ್ಯಯುತ ಆಸ್ತಿಯಾಗಿತ್ತು ಎಂದು ಬಣ್ಣಿಸಿದರು.
ಈ ವೇಳೆ ಮಾತನಾಡಿದ ಅವರು 'ರಾಮನಾಥ ಕೋವಿಂದ್ ಅವರನ್ನು ನಾನು ಸುದೀರ್ಘ ಕಾಲದಿಂದ ಅತ್ಯಂತ ಹತ್ತಿರದಿಂದ ಕಂಡಿದ್ದೇನೆ. ಅವರ ಜೀವನಶೈಲಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ತಿಳಿದಿರುವ ನನಗೆ, ಈ ಪುಸ್ತಕವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಸಿಕ್ಕ ಅತಿ ದೊಡ್ಡ ಬಳುವಳಿ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ' ಎಂದರು.
'ಪ್ರತಿಯೊಬ್ಬರೂ ಈ ಪುಸ್ತಕವನ್ನು ಸ್ವತಃ ಓದಿ, ಅವರ ಜೀವನದ ಅನುಭವಗಳಿಂದ ಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು' ಎಂದು ಆಶಿಸಿದರು.
ಯುವ ಪೀಳಿಗೆಗೆ ಪ್ರೇರಣೆಯಾಗಲಿ
ದೇಶದ ಯುವ ಸಮುದಾಯ ಈ ಕೃತಿಯನ್ನು ತಪ್ಪದೇ ಓದಬೇಕು ಎಂದು ಕರೆ ನೀಡಿದ ಮೋದಿ, 'ಕೋವಿಂದ್ ಅವರು ತಮ್ಮ ಪುಸ್ತಕಕ್ಕೆ ನೀಡಿರುವ ಶೀರ್ಷಿಕೆ ಅತ್ಯಂತ ಸೂಕ್ತವಾಗಿದೆ. ಅವರ ಹೋರಾಟಗಳು ವೈಯಕ್ತಿಕವಾಗಿದ್ದರೂ, ಆ ಹೋರಾಟದಿಂದ ಸಿಕ್ಕ ಯಶಸ್ಸು ಭಾರತೀಯ ಗಣರಾಜ್ಯ ಮತ್ತು ಪ್ರಜಾಪ್ರಭುತ್ವಕ್ಕಾದ ಗೆಲುವಾಗಿದೆ' ಎಂದು ವ್ಯಾಖ್ಯಾನಿಸಿದರು.
ಕೋವಿಂದ್ ಭಾವುಕ ಮಾತುಗಳು
ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಕೋವಿಂದ್, ಇದೊಂದು ಅತ್ಯಂತ ಭಾವುಕ ಕ್ಷಣ. 'ನಾನು ಈ ಹಿಂದೆ ಹಲವು ವೇದಿಕೆಗಳಲ್ಲಿ ಮಾತನಾಡಿದ್ದೇನೆ. ಆದರೆ, ಇಂದಿನ ಸಂದರ್ಭ ತೀರಾ ವಿಶಿಷ್ಟವಾದದ್ದು. ನನ್ನ ಜೀವನದ ಏಳುಬೀಳುಗಳು ಮತ್ತು ಎಲ್ಲಾ ನೈಜ ಅನುಭವಗಳನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು.

